ಮಣಿಪಾಲ: ಅ.14ರಂದು 'ಉದ್ಯಮಶೀಲತಾ ಒಳನೋಟ' ಸಂವಾದ
ಮಣಿಪಾಲ, ಅ.13: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ವತಿಯಿಂದ ಪ್ರಾರಂಭಿಸಲಾದ 'ಉದ್ಯಮಶೀಲತಾ ಒಳನೋಟ' ಸಂವಾದದ ಮೊದಲ ಕಾರ್ಯಕ್ರಮ ಬುಧವಾರ ಸಂಜೆ 4:00ರಿಂದ 5:00ರವರೆಗೆ ನಡೆಯಲಿದೆ.
ಈ ಸಂವಾದ ಕಾರ್ಯಕ್ರಮದಲ್ಲಿ ಉಡುಪಿಯ ಸಾಯಿರಾಧಾ ಕಂಪೆಏನಿಯ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ಹಾಗೂ ಪ್ರುಬಾ ಇಂಡಿಯಾ ಸಾಫ್ಟ್ವೇರ್ನ ಆಡಳಿತ ನಿರ್ದೇಶಕ ದಿನೇಶ್ ಕಾರ್ಣಿಕ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ಈ ಸಂವಾದ ಸರಣಿ ಕಾರ್ಯಕ್ರಮವನ್ನು ಮಾಹೆಯ ಕುಲಪತಿ ಲೆ.ಜ.ಡಾ. ಎಂ.ಡಿ.ವೆಂಕಟೇಶ್ ಅವರು ಉದ್ಘಾಟಿಸಿದರು. ಈ ಮಾಲಿಕೆಯಲ್ಲಿ ಕಾರ್ಪೋರೇಟ್ ನಾಯಕರು, ಹಿರಿಯ ಉದ್ಯಮಿಗಳು, ವಿಷಯ ತಜ್ಞರು ಪಾಲ್ಗೊಂಡು ಕ್ಷೇತ್ರದ ಬಗ್ಗೆ ಒಳನೋಟವನ್ನು ನೀಡಲಿದ್ದಾರೆ ಎಂದರು.
ಮಾಹೆಯ ಕಾರ್ಪೋರೇಟ್ ರಿಲೇಷನ್ನ ನಿರ್ದೇಶಕ ಡಾ.ರವಿರಾಜ್ ಎನ್. ಎಸ್. ಮಾತನಾಡಿ, ಕೇಂದ್ರ ಸರಕಾರ ಹೊಸ ಅನ್ವೇಷಣೆ ಹಾಗೂ ಉದ್ಯಮಿಶೀಲತೆಗೆ ವಿಶೇಷ ಪ್ರೋತ್ಸಾಹ ನೀಡುತಿದ್ದು, ಈ ಬಗ್ಗೆ ನಮ್ಮ ಪರಿಸರದ ಆಸಕ್ತರು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಪ್ರೊ.ಹರೀಶ್ ಜೋಷಿ ಹಾಗೂ ಟ್ಯಾಪ್ಮಿಯ ಪ್ರೊ.ಈಶ್ವರ್ ಹರಿಟಾಸ್ ಸಂವಾದ ನಡೆಸಿದರು. ಮಣಿಪಾಲ ಯುನಿವರ್ಸಲ್ ಟೆಕ್ನಾಲಜಿ ಬ್ಯುಸಿನೆಸ್ ಇನ್ಕ್ಯುಬೇಟರ್ನ ಸಿಇಒ ಡಾ.ಶ್ರೀಹರಿ ಉಪಾಧ್ಯಾಯ ಹಾಗೂ ಪ್ರೊ.ರವಿರಾಜ್ ಎನ್.ಎಸ್. ಸಂವಾದ ನಡೆಸಿಕೊಟ್ಟರು.