ಸಂಸದೆ ಕರಂದ್ಲಾಜೆಯಿಂದ ಮಹಿಳಾ ಕುಲಕ್ಕೆ ಅವಮಾನ: ವರೋನಿಕಾ ಕರ್ನೇಲಿಯೋ
ಉಡುಪಿ, ಅ.13: ಸಂಸದೆ ಶೋಭಾ ಕರಂದಾಜ್ಲೆ, ಡಿಕೆ ರವಿ ಅವರ ಪತ್ನಿ ಕುಸುಮಾ ಅವರ ಬಗ್ಗೆ ಆಡಿದ ಕೀಳು ಮಟ್ಟದ ಮಾತುಗಳಿಂದ ಸಂಸದೆಯ ಮನಸ್ಥಿತಿಯನ್ನು ಸಂಶಯದಿಂದ ನೋಡುವಂತಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ತಿಳಿಸಿದ್ದಾರೆ.
ಸಂಪ್ರದಾಯ ಮತ್ತು ಕಾನೂನಾತ್ಮಕವಾಗಿ ಮದುವೆಯಾಗಿರುವ ಕುಸುಮಾ, ತನ್ನ ಪತಿಯ ಹೆಸರನ್ನು ಬಳಸದೇ ಇನ್ಯಾರ ಹೆಸರನ್ನು ಬಳಸಬೇಕು? ಪತಿಯ ಹೆಸರನ್ನು ಬಳಸಬಾರದು ಎನ್ನಲು ಶೋಭಾ ಕರಂದಾಜ್ಲೆ ಅವರಿಗೆ ಹಕ್ಕು ಎಲ್ಲಿದೆ? ಪತಿ ಪತ್ನಿಯ ನಡುವಿನ ಭಾವನಾತ್ಮಕ ಸಂಬಂಧಗಳ ಬಗ್ಗೆ ಸಂಸದೆಗೆ ತಿಳಿಯದೆ ಇದ್ದಿದ್ದರಿಂದ, ಕೇವಲ ರಾಜಕೀಯಕ್ಕೋಸ್ಕರ ಕೀಳುಮಟ್ಟದ ಮಾತುಗಳನ್ನಾಡುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದರು.
ಅಪರೂಪಕ್ಕೆ ಕ್ಷೇತ್ರಕ್ಕೆ ಬರುವ ಸಂಸದೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡ ಲಾಗದೇ ಜನರ ಭಾವನಾತ್ಮಕ ವಿಷಯಗಳ ಮೂಲಕ ರಾಜಕೀಯದಾಟ ಆಡುತ್ತಿದ್ದಾರೆ. ಹತ್ರಸ್ ಮತ್ತು ದೇಶದ ವಿವಿಧ ಭಾಗದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತುಗಳನ್ನಾಡದ ಸಂಸದೆ, ತಾನು ಒಂದು ಮಹಿಳೆ ಎಂಬುದನ್ನು ಮರೆತು, ಕುಸುಮಾ ಅವರನ್ನು ತನ್ನ ಮಾತಿನ ಮೂಲಕ ಅವಹೇಳನ ಮಾಡಿದ್ದು, ಮಹಿಳಾ ಕುಲಕ್ಕೆ ಅವಮಾನ ಎಂದು ವೆರೋನಿಕಾ ಕರ್ನೇಲಿಯೊ ಆರೋಪಿಸಿದ್ದಾರೆ.





