ಮರಳಿನ ಅಭಾವ: ಬೀದಿಗಿಳಿದ ಸಿವಿಲ್ ಗುತ್ತಿಗೆದಾರರು

ಮಂಗಳೂರು, ಅ.14: ದ. ಕ. ಜಿಲ್ಲೆಯಲ್ಲಿ ತಲೆದೋರಿರುವ ಮರಳಿನ ಅಭಾವವನ್ನು ಖಂಡಿಸಿ ಮಂಗಳೂರು ಸಿವಿಲ್ ಕಂಟ್ರಾಕ್ಟರ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ನಗರದ ಮಿನಿ ವಿಧಾನ ಸೌಧ ಎದುರು, ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅಸೋಸಿಯೇಶನ್ನ ಉಪಾಧ್ಯಕ್ಷ ಮಹಾಬಲ ಕೊಟ್ಟಾರಿ, ಪ್ರತಿ ವರ್ಷ ನಿರ್ಮಾಣ ಕಾಮಗಾರಿ ಗಳಿಗೆ ದ.ಕ. ಜಿಲ್ಲೆಯಲ್ಲಿ 2-3 ತಿಂಗಳು ಮರಳಿನ ಸಮಸ್ಯೆ ತಲೆದೋರುವುದು ಸಾಮಾನ್ಯ. ಆದರೆ ರಾಜ್ಯದಲ್ಲಿ ಈಗಿರುವ ಸರಕಾರ ಅಧಿಕಾರಕ್ಕೆ ಬಂದ ಬಳಿಕ 12 ತಿಂಗಳಾದರೂ ಮರಳು ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಪರವಾನಿಗೆ ಮುಗಿಯುವ 1 ತಿಂಗಳು ಮೊದಲೇ ಪರವಾನಿಗೆ ನವೀಕರಣ ಮಾಡುವಂತೆ ತಿಳಿಸಿದ್ದೆವು. ಆಗ 2020 ಜನವರಿ ಒಳಗೆ ಪರವಾನಿಗೆ ನವೀಕರಣ ಮಾಡುಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸಂಪೂರ್ಣ ಸ್ಥಗಿತವಾಗಿತ್ತು. ಅನ್ಲಾಕ್ ಬಳಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಮರಳು ಒದಗಿಸುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಗೆ ಆರಂಭವಾಗಿಲ್ಲ. ಕಾಳ ಸಂತೆಯಲ್ಲಿ ಮರಳು ಲಭ್ಯವಿದ್ದು, ಅದು ಬಹಳಷ್ಟು ದುಬಾರಿ. ನಾನ್ ಸಿಆರ್ಝಡ್ ವ್ಯಾಪ್ತಿಯ ಮರಳು ಲಭ್ಯವಿದ್ದರೂ ಅದರ ಗುಣಮಟ್ಟ ಚೆನ್ನಾಗಿಲ್ಲ ಎಂದು ಮಹಾಬಲ ಕೊಟ್ಟಾರಿ ಹೇಳಿದರು.
ನಮ್ಮ ಜನ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಮಂದಿ ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡುವುದಾಗಿ ಹೇಳುತ್ತಾರೆ. ಆದರೆ ಅಧಿಕಾರಿಗಳು ಸ್ಮಾರ್ಟ್ ಆಗದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿ ಮರಳಿನ ಸಮಸ್ಯೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಕಾರಣ ಎಂದು ಆರೋಪಿಸಿದರು.
ಹಿರಿಯ ಸದಸ್ಯ ರೋಯ್ ಕ್ಯಾಸ್ಟಲಿನೊ ಮಾತನಾಡಿ, ಕಟ್ಟಡ ನಿರ್ಮಾಣ ಉದ್ಯಮವು ಜಿಲ್ಲೆಯ ಸಾವಿರಾರು ಮಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ವಾಗಿ ಉದ್ಯೋಗಾವಕಾಶ ಕಲ್ಪಿಸುತ್ತಿದ್ದು, ಸುಮಾರು 1 ಲಕ್ಷ ಜನರಿಗೆ ಜೀವನಾಧಾರವಾಗಿದೆ. ಉತ್ತರ ಭಾರತದ ಕಾರ್ಮಿಕರೂ ಇಲ್ಲಿ ದುಡಿಯು ತ್ತಿದ್ದು, ಒಟ್ಟು ದೇಶದ ಅಭಿವೃದ್ಧಿಗೆ ಈ ಉದ್ಯಮ ಕೊಡುಗೆ ನೀಡುತ್ತಿದೆ. ಆದರೆ ಈಗ ಮರಳಿನ ಸಮಸ್ಯೆಯಿಂದ ಯಾರಿಗೂ ಉದ್ಯೋಗ ಇಲ್ಲದಂತಾಗಿ ಆರ್ಥಿಕತೆ ದೊಡ್ಡ ಹೊಡೆತ ಬಿದ್ದಿದೆ ಎಂದರು.
ಪ್ರಸಕ್ತ ಸರಕಾರ ನೈಸರ್ಗಿಕವಾಗಿ ಸಿಗುವ ಮರಳನ್ನು ಸಿಗದಂತೆ ಮಾಡಿ ಇಂದು ಸಿವಿಲ್ ಕಂಟ್ರಾಕ್ಟುದಾರರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದವರು ಹೇಳಿದರು. ಸಿವಿಲ್ ಕಂಟ್ರಾಕ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಎಂ. ಪುರುಷೋತ್ತಮ ಕೊಟ್ಟಾರಿ, ಸುಧೇಶ್ ಜೈನ್, ಉಮೇಶ್ ಯೆಯ್ಯಾಡಿ ಮೊದಲಾದವರು ಮಾತನಾಡಿದರು.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಲೋಪದ ಬಗ್ಗೆ ತನಿಖೆ ನಡೆಸಿ ಮರಳು ಒದಗಿಸಿ
‘ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು 12 ತಿಂಗಳಾಗಿದೆ, ಕಟ್ಟಡ ನಿರ್ಮಾಣ ಕಾಮಗಾರಿ ನಿಂತು ಹೋಗಿದೆ. ಆಗಸ್ಟ್ 15 ರ ಬಳಿಕ ಮರಳುಗಾರಿಕೆಗೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮತ್ತು ಜನ ಪ್ರತಿನಿಧಿಗಳು ನೀಡಿದ ಭರವಸೆ ಹುಸಿಯಾಗಿದೆ. ಲಾಕ್ಡೌನ್ನಿಂದ ಹದಗೆಟ್ಟ ಆರ್ಥಿಕತೆಯನ್ನು ಪುನಶ್ಚೇತನ ಮಾಡಲು ಕೇಂದ್ರ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರೂ ದ.ಕ. ಜಿಲ್ಲಾಡಳಿತ ಅದಕ್ಕೆ ಪೂರಕವಾಗಿ ಮರಳುಗಾರಿಕೆ ಮತ್ತು ಸಾಗಾಟಕ್ಕೆ ಅನುಮತಿ ನೀಡದ ಕಾರಣ ಲಕ್ಷಾಂತರ ವಲಸೆ ಕಾರ್ಮಿಕರು ಅತಂತ್ರ ರಾಗಿದ್ದಾರೆ. ಈ ಹಿಂದೆ 2- 3 ತಿಂಗಳಲ್ಲಿ ನವೀಕರಣ ಮಾಡುತ್ತಿದ್ದ ಮರಳುಗಾರಿಕೆಯ ಪರವಾನಿಗೆಯು ಈ ಬಾರಿ (2019 ಅ. 15 ರಿಂದ )12 ತಿಂಗಳು ಕಳೆದರೂ ನವೀಕರಣ ಆಗದಿರಲು ಸರಕಾರದ ಯಾವ ಇಲಾಖೆಯಿಂದ ಲೋಪ ದೋಷ ಉಂಟಾಗಿದೆ ಎಂದು ತನಿಖೆ ನಡೆಸಿ, ಮರಳುಗಾರಿಕೆಗೆ ಅನುಮತಿ ನೀಡ ಬೇಕು ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕು’ ಎಂದು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.







