ಸಿಂಧೂರಿ ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೊರೆ: ಬಿ.ಶರತ್ ಅರ್ಜಿ ವಿಚಾರಣೆ ಅ.16ಕ್ಕೆ ಮುಂದೂಡಿಕೆ

ಮೈಸೂರು,ಅ.14: ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅವಧಿಗೂ ಮುನ್ನ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರ ಪ್ರಶ್ನಿಸಿ ನಿರ್ಗಮಿತ ಬಿ. ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಬುಧವಾರ ನಡೆಸಿದ ಸಿಎಟಿ, ವಿಚಾರಣೆಯನ್ನು ಅ.16ಕ್ಕೆ ಮುಂದೂಡಿದೆ.
ಕೊರೋನ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕವೇ ಅರ್ಜಿ ವಿಚಾರಣೆ ನಡೆಸಲಾಯಿತು. ಆದರೆ ಈ ವೇಳೆ ತಾಂತ್ರಿಕ ಸಮಸ್ಯೆ ಎದುರಾಗಿ ಹೇಳಿಕೆಗಳು ಸ್ಪಷ್ಟವಾಗಿ ಕೇಳಿಸದ ಕಾರಣ, ವಿಚಾರಣೆಯನ್ನು ಅ.16 ಕ್ಕೆ ಮುಂಡೂಡಲಾಯಿತು. ಜತೆಗೆ ವಾದಿ ಹಾಗೂ ಪ್ರತಿವಾದಿಗಳ ಕಡೆಯ ವಕೀಲರಿಗೆ ಖುದ್ದು ಅಂದು ನ್ಯಾಯಾಲಯದಲ್ಲಿ ಹಾಜರಿರಲು ಕೋರ್ಟ್ ಸೂಚಿಸಿತು.
ಆಗಸ್ಟ್ 29 ರಂದು ಮೈಸೂರು ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅವರನ್ನ ಸರ್ಕಾರ ನೇಮಕ ಮಾಡಿತ್ತು. ಬಳಿಕ ಸೆಪ್ಟಂಬರ್ 29 ರಂದು ದಸರಾ ಮಹೋತ್ಸವದ ಪೂರ್ವ ಸಿದ್ಧತಾ ಕಾರ್ಯಗಳ ನಡುವೆಯೂ ಏಕಾಏಕಿ ಬಿ.ಶರತ್ ಅವರನ್ನು ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನು ಸೆಪ್ಟಂಬರ್29 ರಂದು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿತ್ತು.
ಹೀಗಾಗಿ ಕೇವಲ 30 ದಿನಕ್ಕೆ ವರ್ಗಾವಣೆ ಪ್ರಶ್ನಿಸಿ ಬಿ.ಶರತ್ ಸಿಎಟಿಗೆ ಅರ್ಜಿ ಸಲ್ಲಿಸಿದ್ದು ಅ.7 ರಂದು ವಿಡಿಯೋ ಕಾನ್ಪರೇನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿತ್ತು. ಆದರೆ ಇಂದು ವಿಡಿಯೋ ಕಾನ್ಫರೆನ್ಸ್ ವೇಳೆ ತಾಂತ್ರಿಕ ದೋಷ ಎದುರಾದ ಕಾರಣ, ವಿಚಾರಣೆಯನ್ನು ಮತ್ತೆ ಅ.16ಕ್ಕೆ ಮುಂದೂಡಿ, ಎರಡು ಕಡೆ ವಕೀಲರನ್ನು ಖುದ್ದು ಹಾಜರಿರಲು ಸೂಚಿಸಲಾಯಿತು.







