ಪರಿಣಾಮಕಾರಿ ಎಸ್.ಒ.ಪಿ ಅನುಷ್ಠಾನ- ಐ.ಇ.ಸಿ ಮೂಲಕ ಕೋವಿಡ್ ನಿಯಂತ್ರಿಸಿ: ಮುಖ್ಯಮಂತ್ರಿ
![ಪರಿಣಾಮಕಾರಿ ಎಸ್.ಒ.ಪಿ ಅನುಷ್ಠಾನ- ಐ.ಇ.ಸಿ ಮೂಲಕ ಕೋವಿಡ್ ನಿಯಂತ್ರಿಸಿ: ಮುಖ್ಯಮಂತ್ರಿ ಪರಿಣಾಮಕಾರಿ ಎಸ್.ಒ.ಪಿ ಅನುಷ್ಠಾನ- ಐ.ಇ.ಸಿ ಮೂಲಕ ಕೋವಿಡ್ ನಿಯಂತ್ರಿಸಿ: ಮುಖ್ಯಮಂತ್ರಿ](https://www.varthabharati.in/sites/default/files/images/articles/2020/10/14/263371-1602694020.jpg)
ಬೆಂಗಳೂರು, ಅ.14: ಪ್ರಮಾಣೀಕೃತ ಕಾರ್ಯಾಚರಣೆ ವಿಧಾನಗಳ(ಎಸ್.ಒ.ಪಿ) ಪರಿಣಾಮಕಾರಿ ಜಾರಿ ಮತ್ತು ಮಾಹಿತಿ, ಶಿಕ್ಷಣ ಮತ್ತು ಸಂವಹನ(ಐಇಸಿ) ಚಟುವಟಿಕೆಗಳನ್ನು ವ್ಯಾಪಕಗೊಳಿಸುವ ಮೂಲಕ ಕೋವಿಡ್-19 ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಲಯವಾರು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ವೀಡಿಯೋ ಸಂವಾದವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೊಡಿಸಲು ಮಧ್ಯವರ್ತಿಗಳು ಹಣ ಪಡೆಯುತ್ತಿರುವ ಬಗ್ಗೆ ಹಾಗೂ ಮನೆ ಆರೈಕೆಯಲ್ಲಿದ್ದು ಶುಶ್ರೂಷೆ ಪಡೆಯುತ್ತಿರುವವರ ಹೆಸರಲ್ಲಿ ಆಸ್ಪತ್ರೆಯಲ್ಲಿರುವುದಾಗಿ ಸುಳ್ಳು ಬಿಲ್ಲುಗಳನ್ನು ಸಲ್ಲಿಸುತ್ತಿರುವ ಬಗ್ಗೆಯೂ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ನಿಗಾ ವಹಿಸಿ ತಕ್ಷಣವೇ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.
ಹೋಮ್ ಐಸೊಲೇಷನ್ನಲ್ಲಿ ಇರುವವರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದರ ಮೂಲಕ ಟೆಲಿಮಾನಿಟರಿಂಗ್ ಮೂಲಕ ನಿರಂತರ ನಿಗಾ ವಹಿಸುವುದು ಅತಿ ಮುಖ್ಯ. ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ಕಡಿಮೆ ಮಾಡಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಮಾಡಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ. ಇದಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಮುಖ್ಯಮಂತ್ರಿ ಹೇಳಿದರು.
ಬೆಂಗಳೂರು ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸುರಕ್ಷಿತ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಲು ಪೊಲಿಸರೊಂದಿಗೆ ವಲಯ ಉಸ್ತುವಾರಿ ಅಧಿಕಾರಿಗಳು ಸಮನ್ವಯ ಸಾಧಿಸಿ ಸೂಕ್ತ ಕ್ರಮ ಜರುಗಿಸಬೇಕು. ಹಬ್ಬಗಳು ಪ್ರಾರಂಭವಾಗುತ್ತಿರುವುದರಿಂದ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಯಡಿಯೂರಪ್ಪ ಸೂಚಿಸಿದರು.
ಕೋವಿಡ್ 19 ಕುರಿತ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಹೆಚ್ಚು ಮಾಡಬೇಕಾಗಿ ಸೂಚಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಆಸ್ಪತ್ರೆಯಿಂದ ಮನೆಗೆ ಮರಳುವವರಲ್ಲಿ ಪುನಃ ಸೋಂಕು ಕಾಣಿಸಿಕೊಂಡಿರುವ ಪ್ರಕರಣಗಳೂ ಇರುವುದರಿಂದ ಅವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ತಿಳಿಸಿದರು.
ವಲಯವಾರು ಆರ್ಟಿಪಿಸಿಆರ್ ಪರೀಕ್ಷಾ ವರದಿ, ಮಾಸ್ಕ್ ಧರಿಸುವಿಕೆ ವರದಿಯನ್ನು ಪರಿಶೀಲಿಸಿದರಲ್ಲದೆ, ಹೋಮ್ ಐಸೊಲೇಷನ್ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಹಾಗೂ ಸಂಪರ್ಕ ಪತ್ತೆಗೆ ಒತ್ತು ನೀಡಲು ಸೂಚನೆ ನೀಡಿದರು.
ಸೋಂಕಿತರ ವಿಳಾಸಗಳು ತಪ್ಪಾಗಿರುವುದು ಮತ್ತು ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿರುವುದರಿಂದ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾಗಿರುವವರ ಸಂಖ್ಯೆ ಹೆಚ್ಚಿದೆ. ನಗರದಲ್ಲಿ ಈವರೆಗೆ 20 ಲಕ್ಷಕ್ಕಿಂತ ಹೆಚ್ಚು ತಪಾಸಣೆಗಳಾಗಿವೆ. ಪ್ರತಿ ದಿನ ಸರಿಸುಮಾರು 47 ಸಾವಿರ ತಪಾಸಣೆಗಳಾಗುತ್ತಿದೆ. ವಲಯವಾರು ಸಾವಿನ ಪ್ರಮಾಣ ಕಡಿಮೆಯಾಗುತ್ತಿದ್ದು, ನಿಗದಿತ ಗುರಿಗಿಂತ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತರು ಸಭೆಗೆ ತಿಳಿಸಿದರು.
ಆರ್.ಆರ್.ನಗರಕ್ಕೆ ಪ್ರತ್ಯೇಕ ಎಸ್ಓಪಿ: ಆರ್.ಆರ್.ನಗರದಲ್ಲಿ ಪ್ರತಿ ಸೋಂಕಿತ ವ್ಯಕ್ತಿಗೆ ಕನಿಷ್ಠ 10 ಸಂಪರ್ಕ ಪತ್ತೆಯನ್ನು ಮಾಡಲಾಗುತ್ತಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸಲಾಗಿದೆ. ಉಪಚುನಾವಣೆ ಇರುವುದರಿಂದ ಸುರಕ್ಷಿತ ಅಂತರವನ್ನು ಕಾಪಾಡಲು ಪ್ರತ್ಯೇಕ ಎಸ್.ಒ.ಪಿ ಯನ್ನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಸುಧಾಕರ್, 525 ಐ.ಸಿ.ಯು ಬೆಡ್ಗಳು ನಗರದ ಆಸ್ಪತ್ರೆಗಳಲ್ಲಿ ಲಭ್ಯವಿದೆ. ವೆಂಟಿಲೇಟರ್ಗಳು ಹಾಗೂ ಐ.ಸಿ.ಯು ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ ಎಂದರು.
ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಷಿಜನ್ ಘಟಕಗಳ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದ್ದು, ಬೆಡ್ ಆಕ್ಯುಪೆನ್ಸಿ ವಿವರಗಳನ್ನು ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ವಿವರಿಸಿದರು. ರಾಜ್ಯದ ಒಟ್ಟು ಕೋವಿಡ್ 19 ಪ್ರಕರಣಗಳ ಪೈಕಿ ಅತಿ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿವೆ. ನಿರಂತರವಾಗಿ ಈ ನಿಟ್ಟಿನಲ್ಲಿ ಗಮನಹರಿಸುತ್ತಿರುವುದರಿಂದ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತರು ಹೇಳಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವ ಎಸ್.ಟಿ.ಸೋಮಶೇಖರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
![](https://www.varthabharati.in/sites/default/files/images/galllery/2020/10/14/14BNP (29).jpg)