ಹಿಂಗಾರು ಹಂಗಾಮಿನಲ್ಲಿ ಸಮರ್ಪಕ ಯೂರಿಯಾ-ರಸಗೊಬ್ಬರ ಪೂರೈಕೆಗೆ ಕ್ರಮ: ಡಿ.ವಿ.ಸದಾನಂದಗೌಡ

ಹೊಸದಿಲ್ಲಿ, ಅ.14: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮಗ್ರ ದೃಷ್ಟಿಕೋನಕ್ಕೆ ಅನುಗುಣವಾಗಿ ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ದಿಮೆಗಳು ಸ್ವಯಂ ಸುಸ್ಥಿರತೆ ಸಾಧಿಸಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಕರೆ ನೀಡಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸಾರ್ವಜನಿಕ ವಲಯದ ರಸಗೊಬ್ಬರ ಕಂಪನಿಗಳ ಅಧ್ಯಕ್ಷರು ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕರ ಸಭೆಯ ಅಧ್ಯಕ್ಷತೆ ವಹಿಸಿ, ಉದ್ದಿಮೆಗಳ ಕಾರ್ಯಕ್ಷಮತೆ ಮತ್ತು ಭವಿಷ್ಯದ ಸಿದ್ಧತೆಗಳ ಕುರಿತು ಅವರು ಪರಾಮರ್ಶೆ ನಡೆಸಿದರು.
ಭವಿಷ್ಯದ ಉಳಿವಿಗಾಗಿ ಹಾಗೂ ಖಾಸಗಿ ವಲಯ ಮತ್ತು ಆಮದು ರಸಗೊಬ್ಬರಗಳ ಜೊತೆ ಸ್ಪರ್ಧಿಸಲು, ನ್ಯಾನೋ ರಸಗೊಬ್ಬರ ಮತ್ತು ಅಗತ್ಯಕ್ಕೆ ಅನುಗುಣವಾದ ರಸಗೊಬ್ಬರ ತಯಾರಿಕೆ ಮಾಡಲು, ತಂತ್ರಜ್ಞಾನದ ಉನ್ನತೀಕರಣ ಮಾಡುವುದು ಇಂದಿನ ಅಗತ್ಯವಾಗಿದೆ, ಇದಕ್ಕೆ ತಕ್ಕಂತೆ ಹಾಲಿ ಘಟಕಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಕೊರೋನ ಲಾಕ್ಡೌನ್ ಸಂಕಷ್ಟದ ಕಾಲದಲ್ಲೂ ತಮ್ಮ ಘಟಕಗಳು ಕಾರ್ಯ ನಿರ್ವಹಿಸುವಂತೆ ನೋಡಿಕೊಂಡು ರೈತರಿಗೆ ಯೂರಿಯಾ ಮತ್ತು ಇತರ ರಸಗೊಬ್ಬರದ ಲಭ್ಯತೆ ಖಾತ್ರಿ ಪಡಿಸುವಲ್ಲಿ ಉತ್ತಮ ಕೊಡುಗೆ ನೀಡಿದ ರಸಗೊಬ್ಬರ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸದಾನಂದ ಗೌಡ ಅಭಿನಂದನೆ ಸಲ್ಲಿಸಿದರು.
ಪ್ರಧಾನಮಂತ್ರಿ ಅವರ ಸಮಗ್ರ ದೃಷ್ಟಿಕೋನಕ್ಕೆ ಅನುಗುಣವಾಗಿ ರಸಗೊಬ್ಬರಗಳ ಮಾರಾಟವನ್ನು ನಗದು ರಹಿತ ವಹಿವಾಟಿನ ಮೂಲಕ ನಡೆಸುವಂತೆ ಉತ್ತೇಜಿಸಲು ಕಾರ್ಯತಂತ್ರ ರೂಪಿಸುವಂತೆ ಅವರು ಸಾರ್ವಜನಿಕ ವಲಯದ ಉದ್ದಿಮೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.
ಸಂವಾದದ ವೇಳೆ ಭವಿಷ್ಯದಲ್ಲಿ ಪರಿಸರ ಸಂಬಂಧಿತ ಯಾವುದೇ ನೀತಿಗಳನ್ನು ಪರಿಚಯಿಸುವುದರಿಂದ ಉದ್ದಿಮೆಗಳ ಕಾರ್ಯಾನುಷ್ಠಾನಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿದ್ದು, ರಸಗೊಬ್ಬರ ಸಾರ್ವಜನಿಕ ವಲಯದ ಉದ್ದಿಮೆಗಳು ಪರಿಸರದ ಕಾಳಜಿಗೆ ಸಂಬಂಧಿಸಿದಂತೆ ಸಂವೇದನಾಶೀಲವಾಗಿರಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿ, ಬಿತ್ತನೆ ಪ್ರದೇಶ ವ್ಯಾಪ್ತಿಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿ ಯೂರಿಯಾ ಬೇಡಿಕೆ ಉತ್ತುಂಗದಲ್ಲಿದ್ದಾಗಲೂ, ದೇಶೀಯ ಕಂಪನಿಗಳ ಪ್ರಯತ್ನ ಮತ್ತು ರಸಗೊಬ್ಬರ ಇಲಾಖೆಯ ಅಧಿಕಾರಿಗಳ ಸಕ್ರಿಯ ಮತ್ತು ಸಕಾಲಿಕ ಕ್ರಮಗಳ ಫಲವಾಗಿ ಯೂರಿಯಾ ಮತ್ತು ರಸಗೊಬ್ಬರದ ಕೊರತೆ ಎದುರಾಗಲಿಲ್ಲ, ಮುಂಬರುವ ಹಿಂಗಾರು ಹಂಗಾಮಿನ ಅವಧಿಯಲ್ಲೂ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಸಲು ಸಜ್ಜಾಗುವಂತೆ ಸಾರ್ವಜನಿಕ ವಲಯದ ಉದ್ದಿಮೆಗಳ ಮುಖ್ಯಸ್ಥರಿಗೆ ಸದಾನಂದ ಗೌಡ ಸೂಚನೆ ನೀಡಿದರು.
ರಸಗೊಬ್ಬರ ಸಚಿವಾಲಯದ ಕಾರ್ಯದರ್ಶಿ ಚಬಿಲೇಂದ್ರ ರೌಲ್, ರಸಗೊಬ್ಬರ ಪಿಎಸ್.ಯು.ಗಳು ತಮ್ಮ ವಿಪತ್ತು ನಿರ್ವಹಣೆ ಯೋಜನೆಯನ್ನು ಬಲಪಡಿಸಲು ಸತತ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ರಾಷ್ಟ್ರೀಯ ರಸಗೊಬ್ಬರ ನಿಯಮಿತದ ಸಿಎಂಡಿ ವೀರೇಂದ್ರನಾಥ ದತ್ತ, ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದ ಸಿಎಂಡಿ ಎಸ್.ಸಿ. ಮುಡ್ಗೇರಿಕರ್, ಟ್ರವಾಂಕೂರ್ ರಸಗೊಬ್ಬರ ಮತ್ತು ರಾಸಾಯನಿಕ ನಿಯಮಿತದ ಸಿಎಂಡಿ ಕಿಶೋರ್ ರುಂಗ್ಟಾ, ಮದ್ರಾಸ್ ರಸಗೊಬ್ಬರ ನಿಯಮಿತದ ಸಿಎಂಡಿ ಯು.ಶ್ರೀನಿವಾಸನ್, ಬ್ರಹ್ಮಪುತ್ರ ಕಣಿವೆ ರಸಗೊಬ್ಬರ ನಿಗಮ ನಿಯಮಿತದ ಸಿಎಂಡಿ ಎ.ಕೆ.ಘೋಷ್, ಎಫ್.ಸಿ.ಐ. ಅರಾವಲಿ ಜಿಪ್ಸಮ್ ಮತ್ತು ಭಾರತೀಯ ಖನಿಜ ನಿಯಮಿತದ ಸಿಎಂಡಿ ಅಮರ್ ಸಿಂಗ್ ರಾಥೋಡ್ ಭಾಗಿಯಾಗಿದ್ದರು.







