ಬೆಂಗಳೂರು: ಗುಂಡು ಹಾರಿಸಿ ಪಬ್ ಮಾಲಕನ ಹತ್ಯೆ
![ಬೆಂಗಳೂರು: ಗುಂಡು ಹಾರಿಸಿ ಪಬ್ ಮಾಲಕನ ಹತ್ಯೆ ಬೆಂಗಳೂರು: ಗುಂಡು ಹಾರಿಸಿ ಪಬ್ ಮಾಲಕನ ಹತ್ಯೆ](https://www.varthabharati.in/sites/default/files/images/articles/2020/10/15/263532-1602783501.jpg)
ಬೆಂಗಳೂರು, ಅ.15: ಪಬ್ ಮಾಲಕನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗುರುವಾರ ರಾತ್ರಿ ಇಲ್ಲಿನ ಆರ್ಎಚ್ ಪಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಮನೀಶ್ ಶೆಟ್ಟಿ ಎಂಬವರು ಮೃತ ಪಬ್ ಮಾಲಕ ಎಂದು ತಿಳಿದುಬಂದಿದೆ.
ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಡಬಲ್ ಬ್ಯಾರಲ್ ಗನ್ ನಿಂದ ಗುಂಡಿನ ದಾಳಿ ನಡೆಸಿ ನಂತರ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಮನೀಶ್ ಶೆಟ್ಟಿ ಅನ್ನು ಕಬ್ಬನ್ ಪಾರ್ಕ್ ಪೊಲೀಸರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮನೀಶ್ ಶೆಟ್ಟಿ ಚಿಕ್ಕಮಗಳೂರು ಮೂಲದವರಾಗಿದ್ದು, ರೌಡಿ ಶೀಟರ್ ಆಗಿದ್ದಾರೆ. ಅಲ್ಲದೇ ಭೂಗತ ಪಾತಕಿ ರವಿ ಪೂಜಾರಿ ಹಾಗೂ ಬನ್ನಂಜೆ ರಾಜನ ಆಪ್ತನಾಗಿದ್ದ ಎನ್ನಲಾಗಿದೆ. ಸ್ಥಳಕ್ಕೆ ಕಬ್ಬನ್ ಪಾರ್ಕ್ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ದರೋಡೆ ಪ್ರಕರಣಕ್ಕೂ ನಂಟು
ಮೃತ ಮನೀಶ್ ಶೆಟ್ಟಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಚೆಮ್ಮನ್ನೂರು ಜ್ಯುವೆಲ್ಲರ್ಸ್ ದರೋಡೆ ಪ್ರಕರಣದ ಆರೋಪಿಯಾಗಿದ್ದಾರೆ. ಇವರ ವಿರುದ್ಧ ಮಂಗಳೂರು, ಮುಂಬೈ ಸೇರಿದಂತೆ ಹಲವೆಡೆ ಪ್ರಕರಣ ದಾಖಲಾಗಿದೆ.