ಹೃದ್ರೋಗ ಚಿಕಿತ್ಸೆಗೆ ಕೆನರಾ ಬ್ಯಾಂಕ್ನಿಂದ ಜಯದೇವ ಆಸ್ಪತ್ರೆಗೆ ಆರ್ಥಿಕ ನೆರವು
ಬೆಂಗಳೂರು, ಅ.16: ಕೆನರಾ ಬ್ಯಾಂಕ್ ವತಿಯಿಂದ 250 ಮಂದಿ ಬಡ ಹೃದ್ರೋಗಿಗಳ ಚಿಕಿತ್ಸೆಗೆ 25.97 ಲಕ್ಷ ರೂ. ಆರ್ಥಿಕ ನೆರವು ಹಾಗೂ ಐದು ವ್ಹೀಲ್ಚೇರ್ ನ್ನು ಜಯದೇವ ಆಸ್ಪತ್ರೆಗೆ ನೀಡಲಾಯಿತು.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಅಡಳಿತಾಧಿಕಾರಿ ಎಲ್.ವಿ.ಪ್ರಭಾಕರ ನೇತೃತ್ವದಲ್ಲಿ, ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್ಅರ್)ಯಡಿ ಬಡ ಹೃದ್ರೋಗಿಗಳಿಗೆ ಈ ಆರ್ಥಿಕ ಸಹಾಯ ನೀಡುತ್ತಿದೆ. ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕಿ ಎ.ಮಣಿಮೇಖಲೈ 25.97 ಲಕ್ಷ ರೂ. ಮೊತ್ತದ ಡಿಡಿ ಮತ್ತು ಐದು ವ್ಹೀಲ್ ಚೇರ್ ನ್ನು ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಅವರು, ಕೆನರಾ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಸಮಾಜದ ಕನಿಷ್ಠ ಸೌಲಭ್ಯಗಳು ಇಲ್ಲದ ಜನರ ಉಪಯೋಗಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಿರುದ್ಯೋಗಿ ಯುವಕ-ಯುವತಿಯರಿಗೆ ತನ್ನ 64 ಗ್ರಾಮೀಣ ಸ್ವ ಉದ್ಯೋಗ ಕೇಂದ್ರಗಳ ಮೂಲಕ ಅವಶ್ಯಕ ತರಬೇತಿಯನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಮಾತನಾಡಿ, ನಮ್ಮ ಸಂಸ್ಥೆ ರೋಗಿಗಳ ಹಣಕಾಸಿನ ಸಾಮರ್ಥ್ಯ ಪರಿಗಣಿಸುವುದಿಲ್ಲ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದಕ್ಕೆ ಮೊದಲ ಆದ್ಯತೆ ಆಗಿರುತ್ತದೆ ಎಂದು ತಿಳಿಸಿದ್ದಾರೆ.