ದುಂದು ವೆಚ್ಚಕ್ಕೆ ಕಡಿವಾಣ, ಸೋರಿಕೆ ತಡೆಗೆ ಕೆಎಸ್ಆರ್ಟಿಸಿ ಅಧ್ಯಕ್ಷ ಚಂದ್ರಪ್ಪ ಕರೆ
ಬೆಂಗಳೂರು, ಅ. 16: ಕೆಎಸ್ಆರ್ಟಿಸಿಯ ಪ್ರತಿಯೊಬ್ಬ ಅಧಿಕಾರಿಯೂ ಕೊರೋನ ಸಂದರ್ಭದಲ್ಲಿನ ಸಂಕಷ್ಟವನ್ನು ಅರಿತು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಸಿಬ್ಬಂದಿಯೂ ಪರಿಸ್ಥಿತಿಗೆ ಅನುಗುಣವಾಗಿ ಜವಾಬ್ದಾರಿಯಿಂದ ಇದು ನನ್ನ ಸಂಸ್ಥೆ, ಈ ಸಂಸ್ಥೆ ಇರುವುದರಿಂದ ನಾನು ಬೆಳೆದಿದ್ದೇನೆ. ಈ ಸಂಸ್ಥೆ ಕಟ್ಟಲು, ಯಾವುದೇ ರೀತಿಯ ದುಂದು ವೆಚ್ಚಕ್ಕೆ ಅವಕಾಶ ಕೊಡದೆ ಹಾಗೂ ಸೋರಿಕೆಯಾಗುವುದನ್ನು ತಡೆಗಟ್ಟಿ, ಈ ಸಂಸ್ಥೆ ಉಳಿದರೆ ನಾವು-ನಮ್ಮ ಸಂಸಾರ ಉಳಿಯುತ್ತದೆಂಬ ಪರಿಜ್ಞಾನದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ ಇಂದಿಲ್ಲಿ ಕರೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ನಿಗಮದ ಇಲಾಖಾ ಮುಖ್ಯಸ್ಥರ ಹಾಗೂ 17 ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳ ವರ್ಚುವಲ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಸಾರಿಗೆ ಸಂಸ್ಥೆಗಳ ಕಷ್ಟಕಾಲದಲ್ಲಿ ಕೈ ಹಿಡಿದು ಕಾಪಾಡಿದ್ದಾರೆ. ಸಿಬ್ಬಂದಿಗಳ ವೇತನಕ್ಕೆ ಸಾವಿರಾರು ಕೋಟಿ ರೂ.ಹಣ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ದುಡಿಮೆಯಲ್ಲಿ ಸಂಸ್ಥೆ ನಡೆಸಿಕೊಂಡು ಹೋಗಬೇಕು. ಲಾಕ್ಡೌನ್ ಮೊದಲು 8,200 ಬಸ್ಸುಗಳು ಕಾರ್ಯಾಚರಣೆಯಾಗುತ್ತಿದ್ದು, ಲಾಕ್ಡೌನ್ ಸಡಿಲಿಕೆ ನಂತರದ ಪರಿಸ್ಥಿತಿಯಲ್ಲಿ 5,100 ಬಸ್ಸುಗಳು ಕಾರ್ಯಚರಣೆಯಾಗುತ್ತಿದೆ.
30 ಲಕ್ಷ ಪ್ರಯಾಣಿಕರು ಓಡಾಡುವ ಕಡೆ 10 ಲಕ್ಷ ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದು, ಅದರಲ್ಲಿಯೂ ಪ್ರಯಾಣಿಕರು 50ರಿಂದ 100 ಕಿಲೋಮಿಟರ್ ಒಳಗೆ ಮಾತ್ರ ಪ್ರಯಾಣಿಸುತ್ತಿದ್ದಾರೆ. ಸದ್ಯದ ನಿಗಮದ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರವಾಗಿದ್ದು, ಸುಧಾರಣೆಯಾಗಲು ಬಹಳ ತಿಂಗಳುಗಳು ಅಥವಾ ವರ್ಷವೇ ಬೇಕಾಗುತ್ತದೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೆಲವೊಂದು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾದ ಅಗತ್ಯತೆಯಿದೆ ಎಂದು ಅವರು ತಿಳಿಸಿದರು.
ನೇಮಕಾತಿಗೆ ತಡೆ: ನಿಗಮದಲ್ಲಿ ಎಲ್ಲ ರೀತಿಯ ನೇಮಕಾತಿಯನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ತಡೆ ಹಿಡಿಯುವುದು, ಒಪ್ಪಂದದ ಮೇರೆಗೆ ಬಸ್ಸುಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ನೀಡುವುದು, ನಿಗಮದ ತರಬೇತಿ ಕೇಂದ್ರಗಳಲ್ಲಿ ಎಲ್ಲ ಮಾದರಿಯ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವುದು. ಲಾಭ-ನಷ್ಟದ ಆಧಾರದಲ್ಲಿ ಸಾರಿಗೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಸಾಧ್ಯವಾಗುವುದಿಲ್ಲ, ಆದರೂ, ನಿಗಮವು ಉಳಿಯಬೇಕಾದರೆ ಕೆಲವೊಂದು ಕಟ್ಟುನಿಟ್ಟಿನ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಅವರು ಸಲಹೆ ಮಾಡಿದರು.
ಸಾರಿಗೆ ಆದಾಯ ಹೊರತುಪಡಿಸಿ, ಇತರೆ ಆದಾಯವನ್ನು ಹೆಚ್ಚಿಸಬೇಕು. ಪತ್ರಿಯೊಂದು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಮಾತನಾಡಿಸಿ, ವಿಭಾಗಗಳ ಕಾರ್ಯಚರಣೆ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿದರು. ಅಲ್ಲದೆ, ನಿಗಮದ ಆದಾಯ ಹೆಚ್ಚಳಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಇದೇ ವೇಳೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ನಿಗಮದ ಆಂತರಿಕ ನಿಯತಕಾಲಿಕೆ `ಸಾರಿಗೆ ಸಂಪದ'ವನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ನಿಗಮದ ವ್ಯಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ಡಾ.ರಾಮ್ ನಿವಾಸ್ ಸಪೆಟ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.