ಹಿಂಸಾತ್ಮಕ ಘರ್ಷಣೆ: ಅಸ್ಸಾಂ-ಮಿಝೋರಾಂ ಗಡಿಯಲ್ಲಿ ಉದ್ವಿಗ್ನತೆ
ಉಭಯ ರಾಜ್ಯಗಳಲ್ಲಿ ಭದ್ರತೆ ಹೆಚ್ಚಳ
ಗುವಾಹಟಿ: ಉಭಯ ರಾಜ್ಯಗಳ ಜನರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದ ಬಳಿಕ ಹಲವು ಮಂದಿ ಗಾಯಗೊಂಡಿದ್ದು, ಅಸ್ಸಾಂ-ಮಿಝೋರಾಂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಮಿಝೋರಾಂನ ಕೊಲಾಸಿಬ್ ಜಿಲ್ಲೆ ಹಾಗೂ ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿರುವ ಪ್ರದೇಶದಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಗೃಹ ಕಾರ್ಯದರ್ಶಿ ಅಜಯಕುಮಾರ್ ಭಲ್ಲಾ ಅವರ ಅಧ್ಯಕ್ಷತೆಯಲ್ಲಿ ಎರಡೂ ರಾಜ್ಯಗಳ ನಡುವೆ ಸೋಮವಾರ ಸಭೆ ನಡೆಸಲಾಗುವುದು ಎಂದು ಮಿಝೋರಾಂ ಗೃಹ ಸಚಿವ ಲಾಲ್ಚಾಮ್ಲಿಯಾನಾ ತಿಳಿಸಿದ್ದಾರೆ. ಸಭೆಯಲ್ಲಿ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಜರಾಗಲಿದ್ದಾರೆ ಎಂದರು.
ಮಿಝೋರಾಂ ಹಾಗೂ ಅಸ್ಸಾಂ ಲೈಲಾಪುರದ ವೈರೆಂಗ್ಟೆ ಗ್ರಾಮದ ಸಮೀಪ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಎರಡು ರಾಜ್ಯಗಳು ಭಾರತೀಯ ಮೀಸಲು ಬೆಟಾಲಿಯನ್ ಸೇರಿದಂತೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story