ಮಹಾರಾಷ್ಟ್ರ ರಾಜ್ಯಪಾಲ ಕೋಶಿಯಾರಿಗೆ ಉತ್ತರಾಖಂಡ ಹೈಕೋರ್ಟ್ ನೋಟಿಸ್
ಡೆಹ್ರಾಡೂನ್, ಅ.20: ಸೇವಾವಧಿ ಮುಗಿದರೂ ಸರಕಾರಿ ಬಂಗಲೆಯಲ್ಲೇ ವಾಸ್ತವ್ಯ ಮುಂದುವರಿಸಿ ಸರಕಾರದ ಸೌಲಭ್ಯ ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರಕ್ಕೆ ಹಣ ಪಾವತಿಸಬೇಕು ಎಂಬ ಈ ಹಿಂದಿನ ಆದೇಶವನ್ನು ಪಾಲಿಸದ ಬಗ್ಗೆ ವಿವರಣೆ ನೀಡುವಂತೆ ಮಹಾರಾಷ್ಟ್ರದ ಈಗಿನ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸಹಿತ ರಾಜ್ಯದ ನಾಲ್ವರು ಮಾಜಿ ಮುಖ್ಯಮಂತ್ರಿಗಳಿಗೆ ಉತ್ತರಾಖಂಡ ಹೈಕೋರ್ಟ್ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಕೋಶಿಯಾರಿ 2001ರಿಂದ 2002ರವರೆಗೆ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ನೋಟಿಸ್ಗೆ 4 ವಾರದೊಳಗೆ ಉತ್ತರಿಸುವುದಾಗಿ ಕೋಶಿಯಾರಿಯ ವಕೀಲರು ಹೈಕೋರ್ಟ್ಗೆ ತಿಳಿಸಿದ್ದಾರೆ.
ಸೇವಾವಧಿ ಮುಗಿದ ಬಳಿಕವೂ ಸರಕಾರಿ ನಿವಾಸದಲ್ಲಿ ವಾಸ್ತವ್ಯ ಮುಂದುವರಿಸಿ ವಿದ್ಯುಚ್ಛಕ್ತಿ, ನೀರು, ಪೆಟ್ರೋಲ್ ಮುಂತಾದ ಸೌಲಭ್ಯಗಳನ್ನು ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಒಟ್ಟು 2.8 ಕೋಟಿ ರೂ. ಮೊತ್ತವನ್ನು 6 ತಿಂಗಳೊಳಗೆ ಸರಕಾರದ ಖಜಾನೆಗೆ ಪಾವತಿಸಬೇಕು ಎಂದು 2019ರ ಮೇ 3ರಂದು ನ್ಯಾಯಾಲಯ ಸೂಚಿಸಿತ್ತು. ಆದರೆ ಅವಧಿ ಮುಗಿದರೂ ಹಣ ಪಾವತಿಸದೆ ನ್ಯಾಯಾಲಯದ ನಿಂದನೆ ಎಸಗಿದ್ದಾರೆಂದು ಹೈಕೋರ್ಟ್ಗೆ ಮತ್ತೊಂದು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿಗಳಾದ ಕೋಶಿಯಾರಿ, ರಮೇಶ್ ಪೋಖ್ರಿಯಾಲ್ ನಿಶಾಂಕ್, ವಿಜಯ್ ಬಹುಗುಣ ಮತ್ತು ಭುವನ್ಚಂದ್ ಖಂಡೂರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿಗಳಿಗೆ ಉಚಿತ ನಿವಾಸ, ಕಾರು, ಭದ್ರತಾ ವ್ಯವಸ್ಥೆ ಹಾಗೂ ಇತರ ಭತ್ಯೆಗಳನ್ನು ಮುಂದುವರಿಸಿರುವುದನ್ನು ಪ್ರಶ್ನಿಸಿ ಡೆಹ್ರಾಡೂನ್ ಮೂಲದ ಎನ್ಜಿಒ ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು.