ಸರಳ ದೀಪಾವಳಿ ಆಚರಣೆಗೆ ದ.ಕ. ಡಿಸಿ ಸೂಚನೆ
ಮಂಗಳೂರು, ಅ.21: ಕೋವಿಡ್-19ರ ಸೋಂಕು ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನ ದೀಪಾವಳಿಯನ್ನು ಸರಳ ರೀತಿಯಲ್ಲಿ ಮಾಲಿನ್ಯ ರಹಿತವಾಗಿ ಮತ್ತು ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸಿ ಆಚರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲಾದ್ಯಂತ ನ.14ರಿಂದ 17ರವರೆಗೆ ದೀಪಾವಳಿ ಹಬ್ಬ ಆಚರಿಸುವಾಗ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಧಿಕೃತ ಪರವಾನಿಗೆ ಪಡೆದ ಮಾರಾಟಗಾರರು ಮಾತ್ರ ಸಿಡಿಮದ್ದು ಮಾರಾಟ ಮಾಡಬೇಕು. ಪಟಾಕಿ ಮಾರಾಟದ ಮಳಿಗೆಗಳನ್ನು ನ.1ರಿಂದ 17ರವರೆಗೆ ಮಾತ್ರ ತೆರೆದಿರಬೇಕು. ಪರವಾನಿಗೆದಾರರು ಪರವಾನಿಗೆಯಲ್ಲಿ ನಿಗದಿಪಡಿಸಿದ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಮಾರಾಟ ಅಂಗಡಿ ತೆರೆಯಬೇಕು. ಬೇರೆ ದಿನ ಮತ್ತು ಸ್ಥಳದಲ್ಲಿ ತೆರೆಯಬಾರದು ಎಂದೂ ತಾಕೀತು ಮಾಡಿದ್ದಾರೆ.
ಮಾರಾಟ ಮಳಿಗೆಯಿಂದ ಮತ್ತೊಂದು ಮಳಿಗೆಗಳಿಗೆ ಕನಿಷ್ಠ 6 ಮೀಟರ್ ಅಂತರವಿರಬೇಕು. ಪರವಾನಿಗೆ ಪತ್ರವನ್ನು ಪಡೆದವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು. ಪರವಾನಿಗೆ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಪಟಾಕಿ ಸಿಡಿಮದ್ದುಗಳನ್ನು ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ದಿನ ನಿತ್ಯ ಸ್ಯಾನಿಟೈಸೇಷನ್ ಮಾಡಬೇಕು. ಪಟಾಕಿ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು. ಪಟಾಕಿ ಖರೀದಿಯ ಉದ್ದೇಶಕ್ಕೆ 10 ವರ್ಷಕ್ಕಿಂತ ಕೆಳಗಿನ ಮಕ್ಕಳು, ಬಹು ಅಸ್ವಸ್ಥತೆ ಇರುವವರು, ವೃದ್ಧರು, ಗರ್ಭಿಣಿಯರು, ದುರ್ಬಲ ವ್ಯಕ್ತಿಗಳು ತೆರಳದಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.