ಚುನಾವಣಾ ರ್ಯಾಲಿ ಗೆ ನಿರ್ಬಂಧ: ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿರುವ ಮಧ್ಯಪ್ರದೇಶ ಸರಕಾರ
ಬೋಪಾಲ್, ಅ. 22: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 9 ಜಿಲ್ಲೆಗಳಲ್ಲಿ ರಾಜಕೀಯ ರ್ಯಾಲಿಗಳನ್ನು ನಡೆಸುವುದನ್ನು ನಿರ್ಬಂಧಿಸಿ ಉಚ್ಚ ನ್ಯಾಯಾಲಯದ ಗ್ವಾಲಿಯರ್ ನ್ಯಾಯಪೀಠ ನೀಡಿದ ಆದೇಶದ ವಿರುದ್ಧ ಮಧ್ಯಪ್ರದೇಶ ಸರಕಾರ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಲು ನಿರ್ಧರಿಸಿದೆ.
ಮಧ್ಯಪ್ರದೇಶದಲ್ಲಿ 28 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಆದರೆ, ಬಲವಾದ ಕಾರಣ ಇಲ್ಲದೆ ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳಿಗೆ ಸಭೆ ಸೇರಲು ತಮ್ಮ ವ್ಯಾಪ್ತಿಯಲ್ಲಿ ಅವಕಾಶ ನೀಡದಂತೆ ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠ ಜಿಲ್ಲಾ ದಂಡಾಧಿಕಾರಿ ಅವರಿಗೆ ಬುಧವಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಚುನಾವಣಾ ರ್ಯಾಲಿ ರದ್ದುಗೊಳಿಸಲಾಗಿದೆ. ವೀಡಿಯೊ ಸಂದೇಶವೊಂದರಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಅಶೋಕ ನಗರದ ಶದೋರಾ ಹಾಗೂ ಭಂದರ್ನ ಜನತೆಯಲ್ಲಿ ಕ್ಷಮೆ ಕೋರಿದ್ದಾರೆ. ‘‘ನಾವು ಉಚ್ಚ ನ್ಯಾಯಾಲಯ ಹಾಗೂ ಅದರ ನಿರ್ಧಾರಕ್ಕೆ ಗೌರವ ನೀಡುತ್ತೇವೆ. ಆದರೆ, ಈ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಲಿದ್ದೇವೆ’’ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.