ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಸೋಲಿಸಲು ಸಿಪಿಎಂ ಕರೆ

ಬೆಂಗಳೂರು, ಅ.23: ರಾಜ್ಯ ವಿಧಾನಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರರ ನಾಲ್ಕು ಕ್ಷೇತ್ರಗಳಿಗೆ ಅಕ್ಟೋಬರ್ 28 ರಂದು ನಡೆಯುವ ಚುನಾವಣೆಯಲ್ಲಿ ಈ ಕ್ಷೇತ್ರಗಳ ಮತದಾರರು, ದೇಶದ ಹಾಗೂ ರಾಜ್ಯದ ದುಸ್ಥಿತಿಗೆ ಕಾರಣವಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡನ್ನು ನಿರ್ಣಾಯಕವಾಗಿ ಸೋಲಿಸಿ ಆ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ರಾಜ್ಯ ಸಮಿತಿ ಕರೆ ನೀಡಿದೆ.
ಅದೇ ರೀತಿ, ಪಶ್ಚಿಮ ಪದವೀಧರ ಕ್ಷೇತ್ರ ಹೊರತು ಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಗಳನ್ನು ಗೆಲ್ಲಿಸಲು ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಗೆಲ್ಲಿಸಲು ಸಿಪಿಎಂ ಮನವಿ ಮಾಡಿದೆ.
ಪ್ರವಾಹ ಹಾಗೂ ಅತಿವೃಷ್ಟಿ ಹಾನಿಗೆ ಪರಿಹಾರ ಕೈಗೊಳ್ಳಿರಿ: ಕಳೆದ ಒಂದೆರಡು ವಾರಗಳಿಂದ ರಾಜ್ಯದಾದ್ಯಂತ ಸುರಿದ ಭಾರೀ ಮಳೆ ಹಾಗೂ ಪ್ರವಾಹಗಳಿಂದ ಅಪಾರ ಹಾನಿಯಾಗಿದೆ. ಮನೆಗಳು ಬಿದ್ದು ಹೋಗಿವೆ. ಬೆಳೆಗಳು ಹಾಳಾಗಿವೆ. ಕೈಗೆ ಬಂದ ಬೆಳೆಗಳು ಮನೆಗೆ ತರಲಾಗದೇ ಕಣದಲ್ಲಿಯೇ ಹಾಳಾಗಿವೆ. ಪ್ರವಾಹದಿಂದಾಗಿ ಜಮೀನುಗಳು ಹಲವೆಡೆ ಕೊಚ್ಚಿ ಹೋಗಿವೆ.
ಪಂಪ್ ಸೆಟ್ ಗಳು ಹಾನಿಗೀಡಾಗಿವೆ. ಜನತೆ ತೀವ್ರ ತೆರನಾದ ಕೋವಿಡ್ ಸಂಕಷ್ಟದಲ್ಲಿರುವಾಗಲೇ ಈ ಅತಿವೃಷ್ಟಿಯು ಮೇಲಿಂದ ಮೇಲೆ ದಾಳಿಯನ್ನು ನಡೆಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಳೆದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲೂ ಗಂಭೀರ ಕಾಳಜಿ ವಹಿಸದೇ ನಿರ್ಲಕ್ಷ್ಯ ತೋರಿದ್ದು ತೀವ್ರ ಖಂಡನೀಯವಾಗಿದೆ. ಈಗಲಾದರೂ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನತೆಯ ಜೊತೆ ನಿಲ್ಲುವಂತೆ ಸಿಪಿಎಂ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸಿದೆ.
ಗಣತಿ ಕಾರ್ಯವನ್ನು ವೇಗಗೊಳಿಸಿ ಅಗತ್ಯ ನೆರವನ್ನು ನಿಜ ಪರಿಹಾರದ ರೀತಿಯಲ್ಲಿ ಘೋಷಿಸಬೇಕು. ಹಳೆಯ ಕಾಲ ಬಾಧಿತ ಪರಿಹಾರದ ನಿಯಮಗಳನ್ನು ಬದಲಿಸಿ ಸಮಕಾಲೀನಗೊಳಿಸಬೇಕು. ರಾಜ್ಯದಾದ್ಯಂತ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಸುಸಜ್ಜಿತ ಮನೆಗಳನ್ನು ಕಟ್ಟಿಕೊಡಲು, ಕೊರಕಲು ಬಿದ್ದ ಜಮೀನುಗಳಿಗೆ, ಹಾನಿಗೀಡಾದ ಪಂಪ್ ಸೆಟ್ ಗಳಿಗೆ, ಬೆಳೆನಷ್ಟಕ್ಕೆ ವಿಮೆ ಸೇರಿದಂತೆ ಎಲ್ಲಾ ರೀತಿಯ ಪರಿಹಾರಗಳನ್ನು ಒದಗಿಸಬೇಕು.
ಅದೇ ರೀತಿ, ರಾಜ್ಯದಾದ್ಯಂತ ಎಲ್ಲಾ ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಕುಟುಂಬಗಳಿಗೆ ಮಾಸಿಕ 7,500 ರೂ. ಹಾಗು ತಲಾ ವ್ಯಕ್ತಿಗೆ ಮಾಸಿಕ 15 ಕೆಜಿ ಆಹಾರಧಾನ್ಯ ಮತ್ತು ಪಟ್ಟಣ ಪ್ರದೇಶವೂ ಸೇರಿದಂತೆ ಎಲ್ಲೆಡೆ ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಗಳ ಕಾಲ ಕನಿಷ್ಠ ವೇತನವನ್ನು 750 ರೂ.ಗಳಿಗೆ ಹೆಚ್ಚಿಸಿ ಒದಗಿಸಬೇಕು. ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಗುಂಪುಗಳ ಮತ್ತು ಬೆಳೆ ಸಾಲ ಮನ್ನಾ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಸಿಪಿಎಂ ಕಾರ್ಯದರ್ಶಿ ಯು.ಬಸವರಾಜ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







