ಮುಂದಿನ 3 ತಿಂಗಳು ನಿರ್ಣಾಯಕ: ಹರ್ಷವರ್ಧನ್
ಹೊಸದಿಲ್ಲಿ,ಅ.23: ಹಬ್ಬದ ಋತು ಹಾಗೂ ಚಳಿಗಾಲದ ಸಮಯದಲ್ಲಿ ಕೋವಿಡ್-19 ನಿಯಂತ್ರಣದ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನತೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ಕರೆ ನೀಡಿದ್ದಾರೆ. ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ನಿರ್ಧರಿಸುವಲ್ಲಿ ಮುಂದಿನ ಮೂರು ತಿಂಗಳುಗಳು ನಿರ್ಣಾಯಕವಾಗಿವೆ ಎಂದರು.
ಉತ್ತರಪ್ರದೇಶದ ಆರೋಗ್ಯ ಶಿಕ್ಷಣ ಸಚಿವ ಹಾಗೂ ಇತರ ಹಿರಿಯ ಅಧಿಕಾರಿಗಳ ಜೊತೆ ಕೋವಿಡ್-19 ನಿಯಂತ್ರಣ ಕುರಿತ ಪರಾಮರ್ಶನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ದೇಶದಲ್ಲಿ ಪ್ರಸಕ್ತ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷಕ್ಕೂ ಕಡಿಮೆಯಿದೆ ಹಾಗೂ ಸೋಂಕು ದ್ವಿಗುಣಗೊಳ್ಳುವ ದರವು 97.2 ದಿನಗಳಿಗೆ ವಿಸ್ತರಿಸಿದೆ ಎಂದು ತಿಳಿಸಿದರು.
ಕಳೆದ ಮೂರು ತಿಂಗಳುಗಳಲ್ಲಿ ಕೋವಿಡ್-19 ನಿಯಂತ್ರಣದಲ್ಲಿ ಭಾರತವು ಗಣನೀಯವಾದ ಸುಧಾರಣೆಯನ್ನು ಕಂಡಿದೆಯೆಂದು ಹರ್ಷವರ್ಧನ್ ಸಭೆಯಲ್ಲಿ ತಿಳಿಸಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಒಂದು ದಿನದಲ್ಲಿ 95 ಸಾವಿರದಷ್ಟು ದಾಖಲಾಗುತ್ತಿದ್ದ ಕೋವಿಡ್-19 ಪ್ರಕರಣಗಳು ಈಗ 55 ಸಾವಿರಕ್ಕೆ ಇಳಿದಿವೆ. ಚೇತರಿಕೆ ಪ್ರಮಾಣವು ಶೇ.90ರ ಸಮೀಪಕ್ಕೆ ಬಂದಿದೆ. ಕೋವಿಡ್-19 ಸಾವಿನ ಪ್ರಮಾಣವೂ ಇಳಿಮುಖವಾಗುತ್ತಿದೆ ಎಂದು ಹರ್ಷವರ್ಧನ್ ತಿಳಸಿದ್ದಾರೆ. ದೇಶದಲ್ಲಿ ಕೊರೋನ ಸೋಂಕು ಪರೀಕ್ಷೆಗೆ ಈಗ ಸುಮಾರು 2 ಸಾವಿರ ಪ್ರಯೋಗಾಲಯಗಳಿರುವುದಾಗಿ ಹರ್ಷವರ್ಧನ್ ತಿಳಿಸಿರುವುದಾಗಿ ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ವಿವರಿಸಿದೆ.