ಮತ್ತೆ ಮತ್ತೆ ಲಾಲುಗೆ ಜೈಕಾರದ ಘೋಷಣೆ: ಸಿಟ್ಟಿಗೆದ್ದ ನಿತೀಶ್ ಹೇಳಿದ್ದೇನು?

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ ಬೆಗುಸರಾಯ್ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ಲಾಲು ಪ್ರಸಾದ್ ಯಾದವ್ ಪರ ಜೈಕಾರದ ಘೋಷಣೆ ಕೇಳಿ ತೀವ್ರ ಸಿಡಿಮಿಡಿಗೊಂಡರು.
ಲಾಲು ಪ್ರಸಾದ್ ಪರ ಘೋಷಣೆ ಕೂಗುತ್ತಿದ್ದ ಗುಂಪನ್ನು ಉದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್, "ಒಬ್ಬ ವ್ಯಕ್ತಿಗೆ(ಲಾಲು ಪ್ರಸಾದ್)ಬಿಹಾರವನ್ನು ಆಳುವ ಅವಕಾಶ ಸಿಕ್ಕಿತ್ತು. ಆಗ ಅವರೇನು ಮಾಡಿದರು? ಅವರು ಒಂದಾದರೂ ಶಾಲೆ-ಕಾಲೇಜುಗಳನ್ನು ನಿರ್ಮಿಸಿದ್ದಾರೆಯೇ? ನೀವು ಶಿಕ್ಷಣ ಪಡೆಯಲು ಯಾವುದೇ ಶಾಲೆ ಇತ್ತೇ ಎಂದು ನಿಮ್ಮ ತಂದೆ-ತಾಯಿಯನ್ನು ಕೇಳಿ ನೋಡಿ. ಅವರು(ಲಾಲೂ) ಆಡಳಿತ ನಡೆಸಿದರು. ಯಾವುದೇ ಶಾಲೆಗಳನ್ನು ನಿರ್ಮಿಸದೆಯೇ ಸ್ವಯಂ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಅಕ್ರಮ ಸಂಪಾದನೆ ಮಾಡಿ ಜೈಲಿಗೆ ಹೋದರು. ಜೈಲಿಗೆ ಹೋಗುವಾಗ ಸಿಎಂ ಕುರ್ಚಿಯಲ್ಲಿ ತಮ್ಮ ಪತ್ನಿಯನ್ನು ಪ್ರತಿಷ್ಠಾಪಿಸಿದ್ದರು'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಸರನ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಜನರ ಗುಂಪು ಲಾಲೂ ಪ್ರಸಾದ್ ಪರ ಘೋಷಣೆ ಕೂಗಿದ್ದಾಗ ನಿತೀಶ್ ತಾಳ್ಮೆಯನ್ನು ಕಳೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು.





