ದ.ಕ. ಜಿಲ್ಲೆ : ಕೋವಿಡ್ ಸೋಂಕು ಪ್ರಮಾಣ ಇಳಿಕೆ
ಎರಡು ದಿನದಲ್ಲಿ ಏಳು ಮಂದಿ ಮೃತ್ಯು

ಮಂಗಳೂರು, ಅ.26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಕಳೆದೆರಡು ತಿಂಗಳಿಗೆ ಹೋಲಿಸಿದರೆ ಸದ್ಯದ ಮಟ್ಟಿಗೆ ಕಡಿಮೆಯಾಗುತ್ತಿದ್ದು, ರವಿವಾರ 139 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದರೆ, ಸೋಮವಾರ 153 ಮಂದಿಗೆ ಸೋಂಕು ತಗುಲಿದೆ. ರವಿವಾರ ಮೂವರು, ಸೋಮವಾರ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 29,693ಕ್ಕೆ ಏರಿಕೆಯಾದರೆ, ಒಟ್ಟು 667 ಮಂದಿ ಕೊರೋನದಿಂದ ಮೃತಪಟ್ಟಂತಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರಿಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ರವಿವಾರ 211 ಮಂದಿ ಗುಣಮುಖ ರಾಗಿದ್ದರೆ, ಸೋಮವಾರ 262 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ ಒಂದೆರಡು ತಿಂಗಳ ಹಿಂದೆ ಐದಾರು ಸಾವಿರ ದಾಟಿತ್ತು. ಪ್ರಸ್ತುತ 2,428 ಮಂದಿ ಮಾತ್ರ ಸಕ್ರಿಯ ಸೋಂಕಿತರಿದ್ದಾರೆ. ಒಟ್ಟು 26,598 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 2,46,104 ಮಂದಿಯನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ ಮಾಸ್ಕ್ ಉಲ್ಲಂಘಿಸಿದ ಒಟ್ಟು 9,660 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 10,93,755 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.





