ಕೇಸರಿ ಧ್ವಜದೊಂದಿಗೆ ತಾಜ್ ಮಹಲ್ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ ಸಂಘಪರಿವಾರದ ಸದಸ್ಯರು!
ಆಗ್ರಾ : ರವಿವಾರ ವಿಜಯದಶಮಿಯಂದು ಸಂಘ ಪರಿವಾರ ಸಂಘಟನೆಯಾದ ಹಿಂದು ಜಾಗರಣ ಮಂಚ್ನ ಕೆಲ ಸದಸ್ಯರು ತಾಜ್ ಮಹಲ್ ಆವರಣವನ್ನು ಕೇಸರಿ ಧ್ವಜದೊಂದಿಗೆ ಪ್ರವೇಶಿಸಿ ಅಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಾದ ವೀಡಿಯೋಗಳನ್ನೂ ಸಂಘಟನೆಯ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
"ತಾಜ್ ಮಹಲ್ ಮೂಲತಃ ಶಿವನ ದೇವಸ್ಥಾನ- ತೇಜೋ ಮಹಾಲಯ ಆಗಿತ್ತು. ನಾನು ಕಳೆದ ಕೆಲ ವರ್ಷಗಳಲ್ಲಿ ಕನಿಷ್ಠ ಐದು ಬಾರಿ ಅಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಹಾಗೂ ಈ ಸ್ಮಾರಕವನ್ನು ಸರಕಾರ ಹಿಂದುಗಳಿಗೆ ಹಸ್ತಾಂತರಿಸಲು ಒಪ್ಪುವ ತನಕ ಇದೇ ರೀತಿ ಮಾಡುವುದನ್ನು ಮುಂದುವರಿಸುತ್ತೇನೆ,'' ಎಂದು ಜಾಗರಣ ಮಂಚ್ನ ಆಗ್ರಾ ಘಟಕದ ಮುಖ್ಯಸ್ಥ ಗೌರವ್ ಠಾಕುರ್ ಎಂಬಾತ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಈ ವೀಡಿಯೋದಲ್ಲಿ ಠಾಕುರ್ ತಾಜ್ ಮಹಲ್ ಕಂಪೌಂಡ್ನಲ್ಲಿ ಬೆಂಚ್ ಒಂದರಲ್ಲಿ ಕಣ್ಣು ಮುಚ್ಚಿ ಕುಳಿತಿರುವುದು ಹಾಗೂ ಇನ್ನೊಬ್ಬಾತ ಆತನ ಹಿಂದೆ ಕೇಸರಿ ಧ್ವಜ ಹಿಡಿದು ನಿಂತಿರುವುದು ಕಾಣಿಸುತ್ತದೆ. ಮೂರನೆಯ ವ್ಯಕ್ತಿ ತನ್ನ ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸುತ್ತಿರುವುದೂ ಕಾಣಿಸುತ್ತದೆ. ನಾಲ್ಕನೇ ವ್ಯಕ್ತಿ ವೀಡಿಯೋ ತೆಗೆದಿದ್ದನೆಂದು ತಿಳಿಯಲಾಗಿದೆ .
ತಾಜ್ ಮಹಲ್ ಆವರಣ ಪ್ರವೇಶಿಸಿ ಶಿವನಿಗೆ ಪ್ರಾರ್ಥನೆ ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದೇ ಎಂಬ ಕುರಿತು ಹೆಚ್ಚುವರಿ ಮುಖ್ಯ ಗೃಹ ಕಾರ್ಯದರ್ಶಿಗಳೂ ಪ್ರತಿಕ್ರಿಯಿಸಿಲ್ಲ ಎಂದೂ ವರದಿ ತಿಳಿಸಿದೆ.