ನ.26ಕ್ಕೆ ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ಮುಷ್ಕರ
![ನ.26ಕ್ಕೆ ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ಮುಷ್ಕರ ನ.26ಕ್ಕೆ ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ಮುಷ್ಕರ](https://www.varthabharati.in/sites/default/files/images/articles/2020/10/27/265010-1603811101.jpg)
ಉಡುಪಿ, ಅ.27: ಕೇಂದ್ರ ಸರಕಾರ ಸಂಸತ್ ಮುಂದೆ ಮಂಡಿಸಿ ರಾಷ್ಟ್ರಪತಿ ಅಂಕಿತ ಪಡೆದಿರುವ ಕಾರ್ಮಿಕ ಕಾನೂನು ತಿದ್ದುಪಡಿ, ರೈತ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ 2020, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣದ ವಿರುದ್ದ ಕೇಂದ್ರ ಕಾರ್ಮಿಕ ಸಂಘಟನೆಗಳು ನ.26ರಂದು ನಡೆಸಲು ದ್ದೇಶಿಸಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಉಡುಪಿ ಜಿಲ್ಲಾ ಅಕ್ಷರದಾಸೋಹ ನೌಕರರ ಸಂಘ ಬೆಂಬಲಿಸುತ್ತದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಜಯಶ್ರೀ ಪಡುವರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ನಡೆದ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ತಾಲೂಕು ಕಾರ್ಯದರ್ಶಿ ಕವಿರಾಜ್ ಅವರು ಸಹ ಮಾತನಾಡಿದರು.
ಇತ್ತೀಚೆಗೆ ನಿಧನರಾದ ಹೋರಾಟಗಾರ, ಕಾರ್ಮಿಕ ಮತ್ತು ರೈತ ಮುಖಂಡ ಮಾರುತಿ ಮಾನ್ಪಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದ ನುಡಿ ನಮನ ಸಲ್ಲಿಸಿದರು.
ಸಭೆಯಲ್ಲಿ ಅಕ್ಷರ ದಾಸೋಹ ನೌಕರರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಅಕ್ಷರದಾಸೋಹ ಜಿಲ್ಲಾ ಯೋಜನಾಧಿ ಕಾರಿಗಳ ಕಚೇರಿ ಮುಂದೆ ನವೆಂಬರ್ 9ರಂದು ನಡೆಯುವ ಹೋರಾಟವನ್ನು ಯಶಸ್ವಿ ಗೊಳಿಸಲು ಗ್ರಾಮ ಗ್ರಾಮಗಳಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಮುಖಂಡರಾದ ಕಮಲ ವಂದಿಸಿದರು.