ಅನೇಕತೆಯಲ್ಲಿ ಏಕತೆಯ ಉಡುಪಿಯಲ್ಲಿ ಹಠಾವೋ ಅಭಿಯಾನ ಸರಿಯಲ್ಲ : ಕುಯಿಲಾಡಿ ಸುರೇಶ್ ನಾಯಕ್
ಉಡುಪಿ, ಅ. 27: ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿರುವ, ಅನೇಕತೆ ಯಲ್ಲಿ ಏಕತೆಯ ಸಂಕೇತವಾಗಿರುವ ಉಡುಪಿಯಲ್ಲಿ ಯಾವುದೇ ಹಠಾವೋ ಅಭಿಯಾನಗಳು ಸಮಂಜಸವಲ್ಲ. ಇದನ್ನು ಜಿಲ್ಲಾ ಬಿಜೆಪಿ ಖಂಡಿಸು ತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಮಂಗಳವಾರ ಕಡಿಯಾಳಿಯ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುತ್ತಿರುವ ‘ಮಾರ್ವಾಡಿ ಹಠಾವೋ’ ಅಭಿಯಾನಕ್ಕೆ ಯಾವುದೇ ವ್ಯಾಪಾರಸ್ಥರು ಇದಕ್ಕೆ ಹೆದರಬೇಕಾಗಿಲ್ಲ. ಜಿಲ್ಲೆಯಲ್ಲಿ ಬೇರೆ ಬೇರೆ ಕಡೆಗಳಿಂದ ಬಂದು ಹಲವಾರು ಮಂದಿ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಕ್ಷುಲ್ಲಕ ಕಾರಣಕ್ಕೆ ಈ ರೀತಿ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಂದರು.
ಏಕ್ ಭಾರತ್ ಶೇಷ್ಠ ಭಾರತ್ ಎಂಬ ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯಂತೆ ದೇಶದೆಲ್ಲೆಡೆ ವಿವಿಧ ಸಮುದಾಯಗಳ ಜನತೆ ವಿವಿಧ ರಾಜ್ಯ ಗಳಲ್ಲಿ ಯಶಸ್ವಿ ಉದ್ಯಮವನ್ನು ನಡೆಸಿಕೊಂಡು ಸ್ವಾವಲಂಬನೆಯೊಂದಿಗೆ ರಾಷ್ಟ್ರದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ದೇಶದ ನಾಗರಿಕನೊಬ್ಬ ದೇಶದ ಯಾವುದೇ ಪ್ರದೇಶಗಳಲ್ಲಿ ಜೀವನೋಪಾಯ ಹಾಗೂ ಅಭಿವೃದ್ಧಿಗಾಗಿ ವ್ಯವಹಾರ ನಡೆಸಲು ಅವಕಾಶವಿದೆ ಎಂದು ಸುರೇಶ್ ನಾಯಕ್ ವಿವರಿಸಿದರು.
ಅಲ್ಲದೇ ಉಡುಪಿ ಜಿಲ್ಲೆಯ ಸಾವಿರಾರು ಮಂದಿ ದೇಶ-ವಿದೇಶಗಳಲ್ಲಿ ಉದ್ದಿಮೆ, ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಉಡುಪಿ ಹೊಟೇಲ್ಗಳು ಇಂದು ದೇಶದಾದ್ಯಂತ ಅತ್ಯಂತ ಪ್ರಸಿದ್ಧಿಯನ್ನು ಹೊಂದಿವೆ. ಉಡುಪಿಯಾದ್ಯಂತ ಉದ್ಯಮ ನಡೆಸುತ್ತಿರುವ ವಿವಿಧ ರಾಜ್ಯಗಳ ವ್ಯವಹಾರಸ್ಥರಿಗೆ ‘ಮಾರ್ವಾಡಿ ಹಠಾವೋ’ ಎಂಬ ರೀತಿಯ ಅಭಿಯಾನಗಳ ಮೂಲಕ ತೊಂದರೆ ಕೊಡುವುದನ್ನು ಬಿಜೆಪಿ ಖಂಡಿಸು ತ್ತದೆ. ಇಂತಹ ಯಾವುದೇ ಅನಪೇಕ್ಷಿತ ಹೇಳಿಕೆಗಳು ಅಥವಾ ಚಟುವಟಿಕೆಗಳನ್ನು ಬಿಜೆಪಿ ಸಹಿಸುವುದಿಲ್ಲ ಎಂದವರು ನುಡಿದರು.
‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂಬ ದೇಶವಾಸಿಗಳೆಲ್ಲರೂ ಒಂದಾಗಿ ಸಮೃದ್ಧಿಯ ಸಹಬಾಳ್ವೆ ನಡೆಸುವ ತತ್ವದಲ್ಲಿ ನಂಬಿಕೆ ಇರಿಸಿರುವ ಬಿಜೆಪಿ ಜಿಲ್ಲೆಯ ಯಾವುದೇ ವ್ಯವಹಾರಸ್ಥರನ್ನು ಗುರಿಯಾಗಿಸಿ ಯಾವುದೇ ವ್ಯಕ್ತಿ ಅಥವಾ ಗುಂಪು ನೀಡುವ ಅಸಂಬದ್ಧ ಪೊಳ್ಳು ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ. ಜಿಲ್ಲೆಯ ಯಾವುದೇ ಉದ್ದಿಮೆ ಅಥವಾ ವ್ಯವಹಾರಸ್ಥರು ಅನಗತ್ಯ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಬಿಜೆಪಿ ಜಿಲ್ಲೆಯ ಎಲ್ಲ ವರ್ಗದ ವ್ಯವಹಾರಸ್ಥರ ಜತೆಗಿದೆ. ಈ ಹಿಂದೆಯೂ ಉಡುಪಿಯಲ್ಲಿ ಬೇರೆ ಬೇರೆ ರಾಜ್ಯಗಳ ವ್ಯವಹಾರಸ್ಥರಿಗೆ ತೊಂದರೆಯುಂಟಾದ ಸಂದರ್ಭ ದಲ್ಲಿಯೂ ಬಿಜೆಪಿ ಧೈರ್ಯ ತುಂಬಿದೆ ಎಂದು ನಾಯಕ್ ನೆನಪಿಸಿದರು.
ಇಂತಹ ಪ್ರಾದೇಶಿಕವಾರು ಕ್ಷುಲ್ಲಕ ಹೇಳಿಕೆಗಳು ದೇಶದ ಏಕತೆಗೆ ಮಾರಕವಾಗಿವೆ. ಎಲ್ಲರೂ ಜಿಲ್ಲೆ ಹಾಗೂ ದೇಶದ ಅಖಂಡತೆ, ಏಕತೆ ಮತ್ತು ಸಮಗ್ರತೆಗೆ ತಮ್ಮದೇ ಆದ ಕೊಡುಗೆ ನೀಡುವುದು ಇಂದಿನ ಅಗತ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪದಾಧಿಕಾರಿಗಳಾದ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ, ವೀಣಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆ ಚುನಾವಣೆ: ಗೆಲುವಿನ ವಿಶ್ವಾಸ
ಜಿಲ್ಲೆಯ ಹೆಚ್ಚಿನೆಲ್ಲಾ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಸಂಪೂರ್ಣ ವಿಶ್ವಾಸವನ್ನು ಕುಯಿಲಾಡಿ ಸುರೇಶ್ ನಾಯಕ್ ವ್ಯಕ್ತಪಡಿಸಿದರು.
ಕಾಪು ಪುರಸಭೆಯಲ್ಲಿ ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಮ್ಮಲ್ಲಿಲ್ಲ. ಉಳಿದಂತೆ ಎಲ್ಲಾ ಕಡೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾವು ಸ್ಪರ್ಧೆ ಮಾಡುತ್ತೇವೆ. ಎಲ್ಲಾ ಕಡೆಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದರು.
ಶೀಘ್ರದಲ್ಲಿ ಗ್ರಾ.ಪಂ.ಚುನಾವಣೆ ಬರಲಿದ್ದು, ಈ ಹಿಂದೆ 102 ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಡಳಿತ ನಡೆಸಿದ್ದರು. ಮುಂದಿನ ಚುನಾವಣೆಯಲ್ಲಿ 130ಕ್ಕಿಂತ ಅಧಿಕ ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸುರೇಶ್ ನಾಯಕ್ ತಿಳಿಸಿದರು.