ದಸರಾ ಮೂರ್ತಿ ವಿಸರ್ಜನೆ ವೇಳೆ ಘರ್ಷಣೆ: ದುಷ್ಕರ್ಮಿಗಳ ಗುಂಡಿಗೆ ಓರ್ವ ಬಲಿ, ಹಲವರಿಗೆ ಗಾಯ
ಪಾಟ್ನಾ, ಅ. 27: ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಮಂಗಳವಾರ ದುರ್ಗಾ ದೇವಿಯ ಮೂರ್ತಿ ವಿಸರ್ಜನೆ ಸಂದರ್ಭ ನಡೆದ ಘರ್ಷಣೆಯಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ.
ಮೆರವಣಿಗೆ ವಿಳಂಬ ಮಾಡದಂತೆ ಪೊಲೀಸರು ಮನವಿ ಮಾಡಿದ ಬಳಿಕ ಪೊಲೀಸರು ಹಾಗೂ ಜನರ ನಡುವೆ ಘರ್ಷಣೆ ನಡೆಯಿತು. ‘‘ಈ ಸಂದರ್ಭ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು ಹಾಗೂ ಗುಂಡು ಹಾರಿಸಿತು. ಇದರಿಂದ 20 ಮಂದಿ ಪೊಲೀಸರು ಸಹಿತ 27 ಮಂದಿ ಗಾಯಗೊಂಡರು’’ ಎಂದು ಮುಂಗೇರ್ನ ಪೊಲೀಸ್ ಅಧೀಕ್ಷಕ ಲಿಪಿ ಸಿಂಗ್ ತಿಳಿಸಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಅನುರಾಗ್ ಪೊಡ್ಡಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು 100 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಘರ್ಷಣೆ ಸಂಭವಿಸಿದ ಸ್ಥಳದಲ್ಲಿ 12 ಖಾಲಿ ಕಾಟ್ರಿಜ್ ಹಾಗೂ 3 ದೇಶಿ ನಿರ್ಮಿತ ಪಿಸ್ತೂಲುಗಳು ಪತ್ತೆಯಾಗಿವೆ.
Next Story