ಶಿವಮೊಗ್ಗದ ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಶಿವಮೊಗ್ಗ, ಅ.28: ಈ ಬಾರಿ ರಾಜ್ಯ ಸರ್ಕಾರ ಪ್ರಕಟಿಸಿರುವ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಶಿವಮೊಗ್ಗದ ಮೂವರು ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೈದ್ಯಕೀಯ ವಿಭಾಗದಲ್ಲಿ ಡಾ. ಬಿ.ಎಸ್.ಶ್ರೀನಾಥ್, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಡಾ.ಚಿಂದಿ ವಾಸುದೇವಪ್ಪ, ಯಕ್ಷಗಾನ ಕ್ಷೇತ್ರದಲ್ಲಿ ಎಂ.ಕೆ. ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಶಿವಮೊಗ್ಗದ ಡಾ.ಶ್ರೀನಾಥ್ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕ್ಯಾನ್ಸರ್ ಫೌಂಡೇಶನ್ನಲ್ಲಿ ಸರ್ಜಿಕಲ್ ಆಂಕಾಲಜಿಸ್ಟ್ ಆಗಿದ್ದಾರೆ. ಮೂವತ್ತೈದು ವರ್ಷದಿಂದ ಕ್ಯಾನ್ಸರ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭದ್ರಾವತಿ ಪೇಪರ್ ಟೌನ್ ಪ್ರೌಢಶಾಲೆ, ಸಿಲ್ವರ್ ಜ್ಯುಬಿಲಿ ಕಾಲೇಜಿನಲ್ಲಿ ಶಿಕ್ಷಣ ಪಡೆದವರು. ಬಳಿಕ ದಾವಣಗೆರೆಯಲ್ಲಿ ವೈದ್ಯಕೀಯ ಪದವಿ ಪಡೆದರು. 1979ರಲ್ಲಿ ಇಂಗ್ಲೆಂಡ್ಗೆ ತೆರಳಿ ಸಂಶೋಧನೆ ನಡೆಸಿದರು. ರಾಯಲ್ ಕಾಲೇಜ್ ಆಫ್ ಸರ್ಜನ್ನಲ್ಲಿ ಫೆಲೋಶಿಪ್ ಗಳಿಸಿ, 83ರಲ್ಲಿ ದೇಶಕ್ಕೆ ಮರಳಿ ಕಿದ್ವಾಯಿ ಸಂಸ್ಥೆಗೆ ಸೇರಿದರು. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಕ್ಯಾನ್ಸರ್ ಬಗ್ಗೆ ಕರ್ನಾಟಕ, ಆಂಧ್ರ, ತಮಿಳುನಾಡಿನ ಗ್ರಾಮೀಣ ಭಾಗದಲ್ಲಿ ಕ್ಯಾಂಪ್ ನಡೆಸಿದರು.