ಗ್ರಾ.ಪಂ. ಚುನಾವಣೆ ವಿಚಾರದಲ್ಲಿ ನ್ಯಾಯಾಲಯದ ಅದೇಶಕ್ಕೆ ಬದ್ಧ: ಸಚಿವ ಈಶ್ವರಪ್ಪ
ಶಿವಮೊಗ್ಗ (ಅ.28): ರಾಜ್ಯದಲ್ಲಿ ಕೊರೋನ ಸೋಂಕು ಹರಡುತ್ತಿರುವುದರಿಂದ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿದರೆ ಒಳ್ಳೆಯದು.ಆದರೆ ಹೈಕೋರ್ಟ್ ಮತ್ತು ಚುನಾವಣಾ ಆಯೋಗದ ಸೂಚನೆ ಪಾಲಿಸಲು ಬದ್ಧ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ಕೊರೋನ ಸೋಂಕು ಇರುವುದರಿಂದ ಶಾಲೆಗಳನ್ನು ಆರಂಭಿಸುವುದು ಬೇಡ ಎಂಬ ಅಭಿಪ್ರಾಯ ಇದೆ. ಅದೇ ರೀತಿ ಗ್ರಾಪಂ ಚುನಾವಣೆ ನಡೆಸಿದರೂ ಸೋಂಕು ಹೆಚ್ಚಳದ ಆತಂಕ ಇದೆ. ಹಾಗಾಗಿ ಸ್ವಲ್ಪ ಕಾಲ ಮುಂದೂಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ಎಲ್ಲರದ್ದು ಆಗಿದೆ ಎಂದರು.
ರಾಜ್ಯದ 6021 ಗ್ರಾ.ಪಂ.ಗಳ ಚುನಾವಣೆ ನಡೆಸಿದರೆ ಕೊರೋನ ಸೋಂಕು ಹೆಚ್ಚಳ ಆಗಬಹುದು ಎಂಬ ಆತಂಕ ಗ್ರಾಮೀಣ ಪ್ರದೇಶಗಳಲ್ಲಿ ಇದೆ. ಕೇವಲ ಬಿಜೆಪಿ ಮಾತ್ರವಲ್ಲದೆ, ಜೆಡಿಎಸ್ ಮತ್ತು ಕಾಂಗ್ರೆಸ್ ಕೂಡಾ ಇದನ್ನೇ ಹೇಳಿವೆ. ಇದನ್ನು ಹೊರತು ಪಡಿಸಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಈ ಸಂಬಂಧ ಚುನಾವಣಾ ಆಯೋಗ ಮತ್ತು ಹೈಕೋರ್ಟ್ ನೀಡುವ ಸೂಚನೆ ಪಾಲಿಸಲಾಗುವುದು ಎಂದರು.
Next Story