ಯೋಧರ ಮಕ್ಕಳ ಮೀಸಲಾತಿ ಕಲ್ಪಿಸುವ ಬಗ್ಗೆ ಉದಾರತೆ ಇರಲಿ: ಹೈಕೋರ್ಟ್
ಬೆಂಗಳೂರು, ಅ.29: ದೇಶದ ಗಡಿ ರಕ್ಷಣೆಯಲ್ಲಿ ಕಾರ್ಯನಿರ್ವಹಿಸಿರುವ ಯೋಧರ ಮಕ್ಕಳಿಗೆ ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಉದಾರತೆ ತೋರಬೇಕೆಂದು ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ನಿರ್ದೇಶನ ನೀಡಿದೆ.
ಬಿಎಸ್ಎಫ್ ಮಾಜಿ ಯೋಧರ ಮಗಳಾದ ಆರ್.ಅಂಜಲಿ ಇಂಜಿನಿಯರಿಂಗ್ ಕೋರ್ಸ್ ಸೇರಲು ಮೀಸಲಾತಿ ಬಯಸಿದ್ದರು. ಆದರೆ, ಅರ್ಜಿ ಸಲ್ಲಿಸುವಾಗ ಸಣ್ಣ ತಪ್ಪೊಂದನ್ನು ನಮೂದಿಸಿದ್ದರಿಂದ ಮೀಸಲಾತಿ ನೀಡಲು ಕೆಇಎ ನಿರಾಕರಿಸಿತ್ತು. ಈ ನಿರ್ಣಯವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ಸಣ್ಣ ತಪ್ಪೊಂದನ್ನು ಮುಂದಿಟ್ಟುಕೊಂಡು ಮೀಸಲಾತಿ ನಿರಾಕರಿಸಿದರೆ ಮೂಲ ಉದ್ದೇಶವನ್ನೇ ಹಾಳು ಮಾಡಿದಂತಾಗುತ್ತದೆ. ವಿಶೇಷ ವರ್ಗದ ಮೀಸಲಾತಿ ಅರ್ಜಿ ತಿರಸ್ಕರಿಸುವ ಮೊದಲು ಅಭ್ಯರ್ಥಿ ಮತ್ತು ಆಕೆಯ ಪೋಷಕರೊಂದಿಗೆ ಕೆಇಎ ಮಾತುಕತೆ ನಡೆಸಬಹುದಿತ್ತು ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
Next Story