ಟಿ ಆರ್ ಪಿ ಹಗರಣ: ವಿಚಾರಣೆಗೆ ಹಾಜರಾಗಲು ರಿಪಬ್ಲಿಕ್ ಟಿವಿಯ ಐದು ಹೂಡಿಕೆದಾರರಿಗೆ ಸಮನ್ಸ್
ಮುಂಬೈ: ಟಿ ಆರ್ ಪಿ ಹಗರಣ ಕುರಿತು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ವಿಶೇಷ ತನಿಖಾ ತಂಡ ಇಂದು ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ರಿಪಬ್ಲಿಕ್ ಟಿವಿಯ ಐದು ಮಂದಿ ಹೂಡಿಕೆದಾರರಿಗೆ ಸೂಚಿಸಿದೆ.
ಈ ಹಗರಣ ಸಂಬಂಧ ಪೊಲೀಸರು ಈಗಾಗಲೇ ರಿಪಬ್ಲಿಕ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿ ಶಿವ ಸುಂದರಂ ಸಹಿತ ಹಲವು ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಕೆಲ ಕುಟುಂಬಗಳಿಗೆ ವಿತರಿಸಲೆಂದು ರಿಪಬ್ಲಿಕ್ ಟಿವಿ ಸಹಿತ ಎರಡು ಚಾನೆಲುಗಳಿಂದ ನೇರವಾಗಿ ಹಣ ಪಡೆದಿರುವ ಕುರಿತಂತೆ ಮ್ಯಾಕ್ಸ್ ಮೀಡಿಯಾ ಎಂಬ ಮಾರ್ಕೆಟಿಂಗ್ ಸಂಸ್ಥೆ ನಡೆಸುವ ಅಭಿಷೇಕ್ ಕೊಲ್ವಾಡೆ ಎಂಬಾತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ರಿಪಬ್ಲಿಕ್ ಚಾನೆಲ್ ಹಂಸ ಗ್ರೂಪಿಗೆ ಮಾಡಿರುವ ಹಣ ಪಾವತಿಯನ್ನು ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಮ್ಮದೇ ಚಾನೆಲುಗಳನ್ನು ನೋಡಲು ಕೆಲವು ಮನೆಗಳವರಿಗೆ ಹಣ ನೀಡಿವೆಯೆನ್ನಲಾದ ಬಾಕ್ಸ್ ಸಿನೆಮಾ, ಫಕ್ತ್ ಮರಾಠಿ, ನ್ಯೂಸ್ ನೇಷನ್, ಮಹಾ ಮೂವಿ ಹಾಗೂ ವೊವ್ ಮೇಲೆ ಕೂಡ ಪೊಲೀಸರು ನಿಗಾ ಇಟ್ಟಿದ್ದಾರೆ. ಗುರುವಾರ ಇಲ್ಲಿನ ಸೆಶನ್ಸ್ ನ್ಯಾಯಾಲಯವು ಬಾಕ್ಸ್ ಸಿನೆಮಾ ಹಾಗೂ ಫಕ್ತ್ ಮರಾಠಿ ಚಾನೆಲುಗಳ ಮಾಲಕರಿಗೆ ಜಾಮೀನು ಮಂಜೂರುಗೊಳಿಸಿದೆ.