ಮುಖ್ಯ ಕಾರ್ಯದರ್ಶಿಯ ಕೈ ಸೇರಿದ ಐಪಿಎಸ್ ಅಧಿಕಾರಿಯ ರಾಜೀನಾಮೆ ಪತ್ರ
ಬೆಂಗಳೂರು, ಅ.30: ಸೇವಾ ಹಿರಿತನ ಆಧಾರದ ಮೇಲೆ ಭಡ್ತಿ ನೀಡದ್ದಕ್ಕೆ ಐಪಿಎಸ್ ಅಧಿಕಾರಿ ಡಾ.ಪಿ.ರವೀಂದ್ರನಾಥ್ ಅಸಮಾಧಾನಗೊಂಡು ಸಲ್ಲಿಸಿರುವ ರಾಜೀನಾಮೆ ಪತ್ರವೂ ಇದೀಗ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರ ಕೈ ಸೇರಿದೆ.
ಇಲಾಖೆಯಲ್ಲಿ ಅಸಂವಿಧಾನಾತ್ಮಕ ನಡೆ ಆರೋಪಿಸಿ ಮುಖ್ಯ ಕಾರ್ಯದರ್ಶಿ ಹೆಸರಿಗೆ ರಾಜೀನಾಮೆ ಪತ್ರ ಬರೆದಿದ್ದರು. ಈಗ ಆ ಪತ್ರ ಪೊಲೀಸ್ ಪ್ರಧಾನ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ತಲುಪಿದ್ದು, ರಾಜೀನಾಮೆ ಪತ್ರದ ಬಗ್ಗೆ ಮುಖ್ಯ ಕಾರ್ಯದರ್ಶಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
30 ದಿನ ಕಾಲ: ರಾಜೀನಾಮೆ ಪ್ರಕ್ರಿಯೆ ಹಂತವಾಗಿ ಡಿಪಿಎಆರ್ ಗೆ ತಲುಪಲಿದೆ. ನಂತರ ಮುಖ್ಯಮಂತ್ರಿ ಬಳಿ ರವಾನೆಯಾಗಲಿದ್ದು, ಇದಾದ ಬಳಿಕ ಅಂತಿಮವಾಗಿ ರಾಜೀನಾಮೆ ಪತ್ರ ಕೇಂದ್ರಕ್ಕೆ ತಲುಪುತ್ತೆ. ಅಲ್ಲಿ ಕೇಂದ್ರ ಗೃಹ ಸಚಿವಾಲಯವು ರಾಜೀನಾಮೆ ನೀಡಿರುವ ರವೀಂದ್ರನಾಥ್ ಅವರಿಗೆ ಒಂದು ತಿಂಗಳ ಗಡುವು ನೀಡುತ್ತದೆ. ಈ ಅವಧಿಯಲ್ಲಿ ರವೀಂದ್ರನಾಥ್ ಬಯಸಿದರೆ ತಮ್ಮ ರಾಜೀನಾಮೆ ಪತ್ರವನ್ನು ವಾಪಸ್ ಪಡೆದು, ಸೇವೆಗೆ ಹಾಜರಾಗಬಹುದು.
Next Story