ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಿ : ಅದಾನಿಗೆ ಮಿಥುನ್ ರೈ ಆಗ್ರಹ
ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ 'ಕೋಟಿ ಚೆನ್ನಯ ವಿಮಾನ ನಿಲ್ದಾಣ' ಎಂದು ಹೆಸರಿಡಬೇಕು ಎಂದು ಅದಾನಿ ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಅವರಿಗೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಿಥುನ್ ರೈ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ "ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ನಿಮ್ಮ ಕೈಗೆ ಬಂದಿರುವುದರಿಂದ ಅದಕ್ಕೆ ಅದಾನಿ ವಿಮಾನ ನಿಲ್ದಾಣ ಎಂದು ಹೆಸರು ಇಡುವುದಲ್ಲ, 'ಕೋಟಿ ಚೆನ್ನಯ ವಿಮಾನ ನಿಲ್ದಾಣ' ಎಂದು ಹೆಸರಿಡಬೇಕಾಗಿ ಸಮಸ್ತ ನಾಗರಿಕರು ದ.ಕ. ಜಿಲ್ಲೆ ನಿಮ್ಮೊಂದಿಗೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಯೋಜನೆಯನ್ವಯ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ನಿರ್ವಹಣೆಗಾಗಿ ಹಸ್ತಾಂತರದ ಪ್ರಕ್ರಿಯೆ ನಿನ್ನೆ ತಡರಾತ್ರಿ (ರಾತ್ರಿ 12 ಗಂಟೆಗೆ ) ನಡೆದಿದೆ. ಈ ಮೂಲಕ ಇನ್ನು ಮುಂದೆ ಮಂಗಳೂರು ವಿಮಾನ ನಿಲ್ದಾಣ ‘ಅದಾನಿ ಏರ್ಪೋರ್ಟ್’ ಬದಲಾಗಿದೆ. ವಿಮಾನಗಳ ಹಾರಾಟ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಅದಾನಿ ಸಮೂಹ ಸಂಸ್ಥೆ ನಿರ್ವಹಿಸಲಿದೆ.