ರಾಜ್ಯೋತ್ಸವ ಪ್ರಶಸ್ತಿ : ಕೃಷಿಕರ ಅವಗಣನೆಗೆ ಕೃಷಿಕ ಸಂಘ ಖೇಧ
ಉಡುಪಿ, ನ.1: ಕೃಷಿಕರು ದೇಶದ ಬೆನ್ನೆಲುಬು. ಅವರಿಂದಾಗಿ ದೇಶದ ಜನತೆಯ ಹಸಿವು ನೀಗುತ್ತಿದೆ ಎಂದು ವೇದಿಕೆ ಸಿಕ್ಕಲ್ಲೆಲ್ಲಾ ಹೊಗಳುವ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸರಕಾರಿ ಪ್ರಾಯೋಜಿತ ಸನ್ಮಾನ, ಪ್ರಶಸ್ತಿಯಂತಹ ಸಂದರ್ಭಗಳಲ್ಲಿ ಮಾತ್ರ ಕೃಷಿಕರನ್ನು ಪರಿಗಣಿಸದೇ ನಿರ್ಲಕ್ಷಿಸುತ್ತಾರೆ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಬಂಟಕಲ್ಲು ಬೇಸರ ವ್ಯಕ್ತಪಡಿಸಿದ್ದಾರೆ
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿಕೆಯಲ್ಲಿ ಉಡುಪಿ ಜಿಲ್ಲಾಡಳಿತ ಎಲ್ಲ ಕ್ಷೇತ್ರದ ಸಾಧಕರನ್ನು ಗುರುತಿಸಿದೆ. ಆದರೆ ಕೃಷಿ ಕ್ಷೇತ್ರದ ಸಾಧಕರು ಜಿಲ್ಲೆಯಲ್ಲಿ ಯಾರೊಬ್ಬರೂ ಗಮನಕ್ಕೆ ಬಾರದಿರುವುದು ಆಶ್ಚರ್ಯಕರ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ರಮಿಕರ ವರ್ಗದಲ್ಲೇ ಇರುವ ಕೃಷಿಕರು, ಉಳಿದವರಂತೆ ನಿರ್ದಿಷ್ಟ ಸಮಯ, ದಿನವೆಂದು ನಿಗದಿ ಮಾಡಿಕೊಂಡು ದುಡಿಯುವವರಲ್ಲ. ಬದಲಾಗಿ ಯಾರನ್ನೂ ಕಾಯದೆ, ಯಾವ ಹೊಗಳಿಕೆ ಬಯಸದೆೆ ದಿನಪೂರ್ತಿ ತಮ್ಮ ಕೃಷಿಕಾರ್ಯದಲ್ಲಿ ತೊಡಗಿಕೊಳ್ಳುವವರು. ಅವರ ಶ್ರಮವನ್ನು ಆಡಳಿತ ನಡೆಸುವ ಯಾರು ಕೂಡ ನಿರ್ಲಕ್ಷಿಸುವಂತಿಲ್ಲ ಎಂದು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯನ್ನು ರಾಮಕೃಷ್ಣ ಶರ್ಮ ಟೀಕಿಸಿದ್ದಾರೆ.





