ದೆಹಲಿ ಕರ್ನಾಟಕ ಸಂಘದಲ್ಲಿ ರಾಜ್ಯೋತ್ಸವ
![ದೆಹಲಿ ಕರ್ನಾಟಕ ಸಂಘದಲ್ಲಿ ರಾಜ್ಯೋತ್ಸವ ದೆಹಲಿ ಕರ್ನಾಟಕ ಸಂಘದಲ್ಲಿ ರಾಜ್ಯೋತ್ಸವ](https://www.varthabharati.in/sites/default/files/images/articles/2020/11/1/265710-1604247276.jpg)
ಮಂಗಳೂರು, ನ.1: ದೆಹಲಿ ಕರ್ನಾಟಕ ಸಂಘದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ರವಿವಾರ ಸಡಗರದಿಂದ ಆಚರಿಸಲಾಯಿತು. ಭುವನೇಶ್ವರಿಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಹೆಗಡೆ ಧ್ವಜಾರೋಹಣಗೈದರು.
ಬಳಿಕ ಮಾತನಾಡಿದ ಅವರು, ನಮ್ಮ ನಾಡು ಅನೇಕ ಅಡೆತಡೆಗಳನ್ನು ಎದುರಿಸಿದರೂ ಎಂದಿನಂತೆ ಅಭಿವೃದ್ಧಿ ಪಥದಲ್ಲಿ ಸಾಗುವಂತಾಗಬೇಕು. ಕನ್ನಡಿಗರು ಸುಖ, ಸಂತೋಷ ನೆಮ್ಮದಿಯಿಂದ ಬಾಳುವಂತಾಗಬೇಕು. ಕನ್ನಡಮ್ಮನ ಕೃಪೆಯಿಂದ ಈಗ ಎದುರಾಗಿರುವ ಕೋವಿಡ್-19 ನಂತಹ ವಿಪತ್ತು ತೊಲಗಲಿ ಎಂದರು.
ಉಪಾಧ್ಯಕ್ಷ ಡಾ.ಅವನೀಂದ್ರನಾಥ್ ರಾವ್ ಮಾತನಾಡಿ, ತಾಯ್ನೆಲದ ಋಣ ತೀರಿಸಲಾಗದು. ದೈನಂದಿನ ಕೆಲಸಗಳ ನಡುವೆಯೂ ನಾವು ಕನ್ನಡದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ನಾಡು ನುಡಿಗೆ ದೇಣಿಗೆ ಸಲ್ಲಿಸುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದೆಹಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಪ್ಪ ಎಂ., ಕಲಾವಿದ ಸುಧೀರ್ ಫಡ್ನೀಸ್, ಹಿರಿಯ ಕನ್ನಡಿಗ ಮೂರ್ತಿ ಕೆ.ಎಸ್., ಐಟಿಬಿಪಿಯ ಜಕ್ಕಪ್ಪ, ಪದ್ಮಿನಿ ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಎನ್.ಆರ್. ಶ್ರೀನಾಥ್ ವಂದಿಸಿದರು.