ನಾಸಿರುದ್ದೀನ್ ಶಾ, ಪ್ರಶಾಂತ್ ಭೂಷಣ್ ಸಹಿತ 100ಕ್ಕೂ ಹೆಚ್ಚು ಭಾರತೀಯರ ಖಂಡನೆ
ಫ್ರಾನ್ಸ್ನಲ್ಲಿ ಭಯೋತ್ಪಾದಕ ದಾಳಿ ಪ್ರಕರಣ
ಹೊಸದಿಲ್ಲಿ, ನ.1: ಫ್ರಾನ್ಸ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ಮತ್ತು ಮುಸ್ಲಿಂ ರಾಜಕೀಯ ಮತ್ತು ಧಾರ್ಮಿಕ ಮುಖಂಡರ ಅತಿರೇಕದ ಹೇಳಿಕೆ ಖಂಡನೀಯ ಎಂದು ದೇಶದ 100ಕ್ಕೂ ಹೆಚ್ಚು ಗಣ್ಯ ನಾಗರಿಕರು ಖಂಡಿಸಿದ್ದಾರೆ.
ನಟ ನಾಸಿರುದ್ದೀನ್ ಶಾ, ಕವಿ ಜಾವೇದ್ ಅಖ್ತರ್, ನ್ಯಾಯವಾದಿ ಪ್ರಶಾಂತ್ ಭೂಷಣ್, ನೃತ್ಯನಿರ್ದೇಶಕಿ ಮಲ್ಲಿಕಾ ಸಾರಭಾಯಿ, ನಿವೃತ್ತ ಪೊಲೀಸ್ ಅಧಿಕಾರಿ ಜೂಲಿಯೊ ರಿಬೇರಿಯೊ, ನಟಿ ಶಬನಾ ಆಝ್ಮಿ, ಸಿನೆಮಾ ನಿರ್ದೇಶಕ ಕಬೀರ್ ಖಾನ್, ನರ್ಮದಾ ಬಚಾವೊ ಆಂದೋಲನದ ಕಾರ್ಯಕರ್ತೆ ಮೇಧಾ ಪಾಟ್ಕರ್, ಕಾರ್ಯಕರ್ತೆ ಟೀಸ್ತಾ ಸೆಟಲ್ವಾಡ್ ಸಹಿತ 100ಕ್ಕೂ ಹೆಚ್ಚು ಗಣ್ಯ ಪ್ರಜೆಗಳು ಈ ಖಂಡನಾ ಹೇಳಿಕೆಗೆ ಸಹಿ ಹಾಕಿದ್ದಾರೆ.
ಇಬ್ಬರು ಧರ್ಮಾಂಧರು ಧರ್ಮದ ಹೆಸರಿನಲ್ಲಿ ಇತ್ತೀಚೆಗೆ ನಡೆಸಿದ್ದ ಹತ್ಯೆಯನ್ನು ಈ ಕೆಳಗೆ ಸಹಿ ಹಾಕಿದ ನಾವು ನಿಸ್ಸಂದಿಗ್ಧವಾಗಿ ಮತ್ತು ಸ್ಪಷ್ಟವಾಗಿ ಖಂಡಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಯಾವುದೇ ದೇವರು, ದೇವತೆ , ಪ್ರವಾದಿ ಅಥವಾ ಸಂತರು ಸಹ ಮಾನವರ ಹತ್ಯೆಯನ್ನು ಸಮರ್ಥಿಸುವುದಿಲ್ಲ. ಅಪರಾಧಗಳನ್ನು ಇತರರು ಮಾಡಿದ ಅಪರಾಧಕ್ಕೆ ಹೋಲಿಸುವ ಮೂಲಕ ಅವುಗಳನ್ನು ತರ್ಕಬದ್ಧಗೊಳಿಸುವುದು ಅಸಂಬದ್ಧ ಮತ್ತು ವಿವೇಕಶೂನ್ಯ ವಾದವಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.