ಕೇಂದ್ರದಿಂದ ಪರಿಹಾರ ಕೇಳಲು ಭಯವೇ?: ಬಿಎಸ್ವೈ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
"ಪ್ರವಾಹ ಸಂತ್ರಸ್ತರ ಪರಿಹಾರದ ಹಣ ಸಿಎಂ, ಸಚಿವರ ಜೇಬಿಗೆ ಹೋಯಿತಾ?"
![ಕೇಂದ್ರದಿಂದ ಪರಿಹಾರ ಕೇಳಲು ಭಯವೇ?: ಬಿಎಸ್ವೈ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಕೇಂದ್ರದಿಂದ ಪರಿಹಾರ ಕೇಳಲು ಭಯವೇ?: ಬಿಎಸ್ವೈ ವಿರುದ್ಧ ಸಿದ್ದರಾಮಯ್ಯ ಆಕ್ರೋಶ](https://www.varthabharati.in/sites/default/files/images/articles/2020/11/2/265764-1604321819.jpg)
ಬೆಂಗಳೂರು, ನ. 2: 'ಪ್ರವಾಹ ಪೀಡಿತ ರೈತರಿಗೆ ಪರಿಹಾರ ನೀಡಲೂ ದುಡ್ಡಿಲ್ಲ. ಕೊರೋನ ಚಿಕಿತ್ಸೆಗೆ ಹಣವಿಲ್ಲ, ಬೊಕ್ಕಸ ಮಾತ್ರ ಖಾಲಿಯಾಗಿದೆ ಎಂದು ರಾಜ್ಯ ಸರಕಾರ 90 ಸಾವಿರ ಕೋಟಿ ರೂ. ಸಾಲ ಮಾಡಲು ಹೊರಟಿದೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಮುಖ್ಯಮಂತ್ರಿಗಳು ಮತ್ತು ಸಚಿವರ ಜೇಬಿಗೆ ಹೋಯಿತಾ? ಬಿಎಸ್ವೈ ಉತ್ತರ ಕೊಡಿ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕಳೆದ ವರ್ಷ ಸರಕಾರ ನಡೆಸಿದ್ದ ಸಮೀಕ್ಷೆಯಂತೆ ನೆರೆಯಿಂದಾಗಿ ಹಾನಿಗೀಡಾದ ಮನೆಗಳು 2.24 ಲಕ್ಷ. ಪರಿಹಾರ ನೀಡಿರುವುದು ಮಾತ್ರ 1.24 ಲಕ್ಷ ಮನೆಗಳಿಗೆ ಎಂದು ಕೇಂದ್ರಕ್ಕೆ ವರದಿ ಕಳುಹಿಸಲಾಗಿದೆ. ಇನ್ನು ಈ ವರ್ಷದ ಮಳೆಗೆ ಹಾನಿಗೀಡಾಗಿರುವ ಮನೆಗಳಿಗೆ ಪರಿಹಾರ ಈ ಸರಕಾರ ನೀಡುವುದು ಹೇಗೆ ಸಾಧ್ಯ?' ಎಂದು ಕೇಳಿದ್ದಾರೆ.
`ಕಳೆದ ವರ್ಷದ ಬೆಳೆ-ಮನೆ ಕಳೆದುಕೊಂಡವರಿಗೆ ಇನ್ನೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ, ಈ ವರ್ಷ ಸಮೀಕ್ಷೆಯನ್ನೇ ಮಾಡಿಲ್ಲ. ಮುಖ್ಯಮಂತ್ರಿ, ಸಚಿವರು ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಅಧಿಕಾರಿಗಳು ಮನೆಯಲ್ಲಿ ಹಾಯಾಗಿದ್ದಾರೆ, ಸಂತ್ರಸ್ತರು ಬೀದಿಯಲ್ಲಿದ್ದಾರೆ' ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
`ಕಳೆದ ವರ್ಷದ ಅತಿವೃಷ್ಟಿ ಹಾನಿಗೆ ರಾಜ್ಯ ಸರಕಾರ ಕೇಂದ್ರದಿಂದ ಕೇಳಿದ್ದು 35 ಸಾವಿರ ಕೋಟಿ ರೂ.ಪರಿಹಾರ ಅವರು ನೀಡಿದ್ದು 1,654 ಕೋಟಿ ರೂ., ಈ ಬಾರಿ ರಾಜ್ಯ ಸರಕಾರ ಈ ವರೆಗೆ ಕೇಳಿದ್ದು 4 ಸಾವಿರ ಕೋಟಿ ರೂ. ಕೇಂದ್ರದಿಂದ ಪರಿಹಾರ ಕೇಳಲೂ ಭಯನಾ? ಮುಖ್ಯಮಂತ್ರಿ ಯಡಿಯೂರಪ್ಪನವರೇ ಉತ್ತರಕೊಡಿ' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
`ಆಗಸ್ಟ್ ನಿಂದ ಮೂರು ತಿಂಗಳು ಸುರಿದ ಮಳೆಯಿಂದಾಗಿ 23 ಜಿಲ್ಲೆಗಳ 130 ತಾಲೂಕುಗಳು ಬಾಧಿತವಾಗಿವೆ. ಕಳೆದ ವರ್ಷ ಹತ್ತು ಲಕ್ಷ ಹೆಕ್ಟೇರ್ ಕೃಷಿಭೂಮಿ ಹಾನಿಗೀಡಾಗಿದ್ದರೆ, ಈ ವರ್ಷ 11 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. ಈ ದುಪ್ಪಟ್ಟು ನಷ್ಟದಿಂದ ರೈತರು ನೆಲಹಿಡಿದಿದ್ದಾರೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ಗಮನ ಸೆಳೆದಿದ್ದಾರೆ.