ಉಡುಪಿ ಡಿಸಿ ನೇತೃತ್ವದಲ್ಲಿ ಮಿಲ್ಗೆ ದಾಳಿ : ಅಕ್ರಮ ದಾಸ್ತಾನು ಆರೋಪದಲ್ಲಿ 600 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

ಉಡುಪಿ, ನ. 2: ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಪಂ ವ್ಯಾಪ್ತಿಯ ಕಲ್ಮರ್ಗಿ ಎಂಬಲ್ಲಿನ ರೈಸ್ಮಿಲ್ ಒಂದಕ್ಕೆ ಸೋಮವಾರ ದಾಳಿ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಗಳ ತಂಡ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಆರೋಪದಲ್ಲಿ ಅನ್ನಭಾಗ್ಯ ಯೋಜನೆಯ ಸುಮಾರು 600ಕ್ಕೂ ಅಧಿಕ ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದೆ.
ಜಿಲ್ಲೆಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮತ್ತು ದಾಸ್ತಾನು ಮಾಡುತ್ತಿರುವ ಕುರಿತು ಸುಮಾರು ಒಂದು ತಿಂಗಳಿನಿಂದ ಸತತವಾಗಿ ಮಾಹಿತಿಯನ್ನು ಸಂಗ್ರಹಿಸಿ, ಇಂದು ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಈ ಅಕ್ಕಿಯನ್ನು ಮನೆಮನೆಗಳಿಂದ ಸಂಗ್ರಹಿಸಿ ತಂದು ಇಲ್ಲಿ ದಾಸ್ತಾನು ಇರಿಸಿರುವುದು ಕಂಡುಬಂದಿದೆ. ಈ ಅಕ್ಕಿ ಚೀಲಗಳನ್ನು ಲಾರಿಗಳಿಗೆ ಲೋಡ್ ಮಾಡಿಕೊಂಡು ಹಾವೇರಿ ಸೇರಿದಂತೆ ಹೊರಜಿಲ್ಲೆಗಳಿಗೆ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಡಿಸಿ ನೇತೃತ್ವ ದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ. ಮಿಲ್ನ ಮಾಲಕ ಪರಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಶಪಡಿಸಿಕೊಂಡಿರುವ ಅಕ್ಕಿಯ ಒಟ್ಟು ಮೌಲ್ಯ 16.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮೂವರು ಲಾರಿ ಚಾಲಕರು ಮತ್ತು ಕ್ಲೀನರ್ ಸೇರಿದಂತೆ, 6 ಲಾರಿಗಳು, ಎರಡು 407 ಟೆಂಪೋ, ಒಂದು ಟಾಟಾ ಹಾಗೂ ಮಾರುತಿ ಇಕೋ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಅಧಿಕಾರಿಗಳ ತಂಡ ನಡೆಸುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ಆಹಾರ ಇಲಾಖೆಯ ಉಪನಿರ್ದೇಶಕ ಗಜೇಂದ್ರ ವಿ., ಉಡುಪಿ ಆಹಾರ ನಿರೀಕ್ಷಕಿ ಪಾರ್ವತಿ, ಕುಂದಾಪುರ ನಿರೀಕ್ಷಕ ಸುರೇಶ್, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಕೋಟ ಎಸ್ಸೈ ಮೊದಲಾದವರು ಹಾಜರಿದ್ದರು.
ಬಡವರ ಅಕ್ಕಿ ಮಾರಾಟ ಜಾಲದ ವಿರುದ್ಧ ಕ್ರಮ: ಡಿಸಿ
ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು, ಮಾರಾಟ ಮಾಡುವ ಜಾಲ ಸಕ್ರಿಯವಾಗಿದ್ದು, ಕಳೆದ ತಿಂಗಳು ಕುಂದಾಪುರ ತಾಲೂಕಿನಲ್ಲಿ ಈ ರೀತಿಯ ಜಾಲವನ್ನು ಪತ್ತೆ ಮಾಡಲಾಗಿದೆ. ಹೀಗೆ ಬಡವರ ಅಕ್ಕಿಯನ್ನು ಮಾರಾಟ ಮಾಡುವ ಒಂದೊಂದೇ ಜಾಲ ಪತ್ತೆಯಾಗುತ್ತಿದೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ ಇಂತಹ ಜಾಲಗಳನ್ನು ಪತ್ತೆ ಹಚ್ಚಿ ಮಟ್ಟ ಹಾಕಲು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದು, ಈ ಸಂಬಂಧ ಹಲವು ಪ್ರಕರಣ ಗಳನ್ನು ಈಗಾಗಲೇ ದಾಖಲಿಸಿಕೊಂಡಿದೆ. ಪಡಿತರ ಅಕ್ಕಿಯ ಅಕ್ರಮ ದಾಸ್ತಾನು, ಸಾಗಾಟ ಕುರಿತು ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ತಿಳಿಸಬೇಕು. ಆಗ ಮಾತ್ರ ಇಂತಹ ಜಾಲದ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ಸಾರ್ವಜನಿಕರೂ ಕೂಡ ತಮಗೆ ಸಿಗುವ ಪಡಿತರ ಅಕ್ಕಿಯನ್ನು ಮಾರಾಟ ಮಾಡದೆ, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
















