ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ ನಿಧನ
![ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ ನಿಧನ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ ನಿಧನ](https://www.varthabharati.in/sites/default/files/images/articles/2020/11/3/265868-1604378919.gif)
ಬಂಟ್ವಾಳ, ನ.3: ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ (97) ಮಂಗಳವಾರ ಬೆಳಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಬಿ.ಸಿ.ರೋಡಿನವರಾದ ಇವರ ಕಳೆದ ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಶಿವಮೊಗ್ಗದ ಮಗನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮೃತರು ಪತ್ನಿ, ಪುತ್ರ ಹಾಗೂ ಐವರು ಹೆಣ್ಣುಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ತಮ್ಮ ಜೀವಿತದ ಬಹು ವರ್ಷಗಳನ್ನು ಶಿವಮೊಗ್ಗದಲ್ಲಿ ಕಳೆದಿದ್ದರೂ, ಇವರು ಮೂಲತಃ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನವರು. ಕಲಿತದ್ದು 7ನೇ ತರಗತಿವರೆಗೆ. ಆದರೆ ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ತೆಲುಗು... ಹೀಗೆ ಪಂಚಭಾಷೆ ಬಲ್ಲವರಾಗಿದ್ದರು.
ವಿದ್ಯಾರ್ಥಿ ದೆಸೆಯಿಂದಲೇ ಬಾವುಟ ಹಿಡಿಯುವುದು, ಜೈಕಾರ ಕೂಗುವುದು, ಕರಪತ್ರ ಹಂಚುವುದು ಮೊದಲಾದವುಗಳ ಮೂಲಕ ಕ್ರಾಂತಿಕಾರಿಯೆಂದು ಗುರುತಿಸಿಕೊಂಡಿದ್ದ ಇವರು 1942ರ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.
1923 ರಲ್ಲಿ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದಲ್ಲಿ ಜನಿಸಿದ ಶ್ಯಾಮರಾಯ ಆಚಾರ್ಯರು ಎಂ.ಡಿ.ಶ್ಯಾಮರಾವ್ ಎಂದೇ ಪ್ರಸಿದ್ಧರು.
ಬಂಟ್ವಾಳ-ಮಂಗಳೂರು ಮುಖ್ಯ ರಸ್ತೆಯ ಪಕ್ಕದಲ್ಲಿ ಇದ್ದ ಇವರ ಮನೆಯ ಮುಂದೆ ಹಾದು ಹೋಗುತ್ತಿದ್ದ ಸ್ವಾತಂತ್ರ್ಯ ಚಳವಳಿಗಾರರ ಸಾಲುಸಾಲು ಹಾಗೂ ಪೊಲೀಸರ ಮಾರ್ಚ್ ಫಾಸ್ಟ್ ಸಣ್ಣ ವಯಸ್ಸಿನ ಶ್ರೀ ಶಾಮರಾಯರಿಗೆ ಪ್ರೇರಣೆಯಾದವು.
ಎಳೆಯದರಲ್ಲಿ ತನ್ನದೇ ಸ್ನೇಹಿತರ ಗುಂಪು ಕಟ್ಟಿ ತಂದೆಯವರಿಗೆ ಗೊತ್ತಾಗದಂತೆ, ಚಳವಳಿಗಳ ಸಮಯದಲ್ಲಿ, ಬ್ರಿಟಿಷರ ದೂರವಾಣಿ ಲೈನ್ ಗಳನ್ನು ಕಟ್ ಮಾಡುವುದು, ಚಳವಳಿಗಾರರಿಗೆ ಗುಪ್ತವಾಗಿ ಮಾಹಿತಿ ತಲುಪಿಸುವ ಸಂವಾಹಕನ ಕೆಲಸವನ್ನೂ ಮಾಡಿದವರು. ಈ ಹುಡುಗನ ದೇಶಪ್ರೇಮ ಊರು ತುಂಬಾ ಹರಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಯ್ತು. ತಂದೆಯ ಗಮನಕ್ಕೆ ಬಂದಾಗ ಊರು ಬಿಟ್ಟು , 3 , 4 ದಿನ ನಡೆದು ಹೋಗಿ ಸೇರಿದ್ದು ಕರ್ಮ ಭೂಮಿ ಶಿವಮೊಗ್ಗಕ್ಕೆ. ಬಳಿಕ ತಮ್ಮ ಹೆಸರನ್ನು ಶ್ಯಾಮ ರಾವ್ ಎಂದು ಹೇಳಿ ಕೊಂಡು, ತಂದೆಯವರಿಂದ ದೂರ ಉಳಿದ ಇವರು ಸ್ವಾತಂತ್ರ್ಯ ಚಳುವಳಿಯಲ್ಲಿ ಅಡೆತಡೆಯಿಲ್ಲದೆ ತಮ್ಮನ್ನು ತಾವು ತೊಡಗಿಸಿಕೊಂಡರು.
ಅಂದಿನ ಕಾಂಗ್ರೇಸ್ ಸೇವಾದಳಕ್ಕೆ ಸೇರಿಕೊಂಡು ಗುಪ್ತವಾಗಿ ವಿವಿಧೆಡೆ ನಡೆಯುವ ಚಳುವಳಿಗಳ ಆಯೋಜನೆಗಳಲ್ಲಿ ಸಹಾಯ ಮಾಡುವುದು, ಸಂದೇಶಗಳನ್ನು ರವಾನಿಸುವುದು , ಹೀಗೆ ಯುವಕನಾಗಿ ತಮ್ಮನ್ನು ತೊಡಗಿಸಿಕೊಂಡರು. ಈ ಸಮಯದಲ್ಲಿ ಅನೇಕ ಮಹನೀಯರ ಒಡನಾಟ ಇವರಿಗೆ ದೊರಕಿತು. ಗೋಪಾಲ ಗೌಡರು, ರವಳಪ್ಪ, ದೊರೆಸ್ವಾಮಿ ಅಯ್ಯಂಗಾರ್, ಪೊನ್ನಮ್ಮ, ಎಂ.ಪಿ. ಈಶ್ವರಪ್ಪ, ಲಾಯರ್ ಸಿದ್ದಯ್ಯ, ನಾಗಪ್ಪ ಶೆಟ್ಟಿ, ಖಾದಿ ಶಂಕರಪ್ಪ ಮುಂತಾದವರ ಒಡನಾಟ ಬೆಳೆಯಿತು.
1946 ರಲ್ಲಿ ಬಂಧಿತರಾಗಿ ಶಿವಮೊಗ್ಗದ ಜೈಲಿನಲ್ಲಿ 2 ತಿಂಗಳ ಜೈಲು ಶಿಕ್ಷೆ ಗೆ ಒಳಗಾದರು.
ಸ್ವಾತಂತ್ರ್ಯ ಸಿಕ್ಕ ನಂತರವೂ ತಮ್ಮ ಸೇವಾ ಕಾರ್ಯವನ್ನು ಮುಂದುವರಿಸಿದ ಇವರು, ಗಾಂಧೀಜಿ ಯವರು ಹಾಕಿಕ್ಕೊಟ್ಟ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
ಸ್ವಂತವಾಗಿ ಹಿಂದಿ ಕಲಿತು, ಹಿಂದಿಯನ್ನು ದೇಶದ ಸಂಪರ್ಕ ಭಾಷೆ ಮಾಡುವ ಗಾಂಧೀಜಿಯವರ ಕನಸಿನಂತೆ , ಶಿವಮೊಗ್ಗದ ಗಾಂಧಿ ಮಂದಿರದಲ್ಲಿ ಸಾವಿರಾರು ಜನರಿಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಮೂಲಕ ಯಾವುದೇ ಶುಲ್ಕವಿಲ್ಲದೇ ಹಿಂದಿ ಪಾಠ ಮಾಡಿದರು. ಈಗಿನ ಗಾಂಧಿ ಮಂದಿರಕ್ಕೆ ಇವರೇ ನಾಮಕರಣ ಮಾಡಿದ್ದು, ಮುಂದೆ ಅದುವೇ ಚಾಲನೆಯಲ್ಲಿ ಉಳಿದದ್ದು ವಿಶೇಷ,.
1960 ರಲ್ಲಿ ರಾಜೀವಿಯವರನ್ನು ಮದುವೆಯಾದ ನಂತರ ಜೀವನೋಪಾಯಕ್ಕಾಗಿ ಮಾಡಿದ್ದು, ಟೈಪ್ ರೈಟರ್ ರಿಪೇರಿ , ವೈದ್ಯಕೀಯ ಉಪಕರಣಗಳ ರಿಪೇರಿಗಳನ್ನು. ಆ ಸಮಯದಲ್ಲಿ ಬಾಂಬೆ ಮತ್ತು ಬೆಂಗಳೂರಿನಿಂದ ತಂತ್ರಜ್ಞರು ಬರ ಬೇಕಾಗಿದ್ದ ಸಂಧರ್ಭದಲ್ಲಿ, ಅವರ ಕೆಲಸಗಳನ್ನು ಸ್ವತಃ ಕಲಿತು , ಸೇವಾ ಮನೋಭಾವದಿಂದ ಕೆಲಸ ಮಾಡಿ ಜನರ ಪ್ರೀತಿಗೆ ಪಾತ್ರರಾದರು.
ಅಂಬರ ಚರಕದಲ್ಲಿ ನೂಲು ತೆಗೆಯುವುದರಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ ಇವರು, ಮನೆಮನೆಗೆ ತೆರಳಿ ಚರಕದಿಂದ ಇವರು ನೂಲು ತೆಗೆಯುವ ತರಬೇತಿ ನೀಡಿದ್ದಾರೆ. ಚಿನ್ನದ ಕೆಲಸದಲ್ಲೂ ವಿಶೇಷ ಪ್ರಾವಿಣ್ಯತೆ ಹೊಂದಿದ್ದ ಇವರು ಹೋರಾಟದ ಆ ದಿನಗಳಲ್ಲಿ ರಾತ್ರಿ ಹೊತ್ತು ತನ್ನ ಅಣ್ಣ ಪುಟ್ಟಣ್ಣ ಆಚಾರ್ ರೊಂದಿಗೆ ಚಿನ್ನದ ಕೆಲಸ ಮಾಡಿಕೊಂಡಿದ್ದರು.
ಇವರ ದೇಶ ಪ್ರೇಮಿ ಬದುಕನ್ನು ಗೌರವಿಸಿ ಈಗಾಗಲೇ ನಾಡಿನ ಹಲವಾರು ಸಂಘ ಸಂಸ್ಥೆಗಳು ಶ್ಯಾಮ್ ರಾವ್ ರವರನ್ನು ಗೌರವಿಸಿದೆ.