‘ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನಕ್ಕೆ ಭೂಮಿ’
![‘ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನಕ್ಕೆ ಭೂಮಿ’ ‘ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನಕ್ಕೆ ಭೂಮಿ’](https://www.varthabharati.in/sites/default/files/images/articles/2020/11/3/265909-1604409696.jpg)
ಉಡುಪಿ, ನ.3: ಮುಂದಿನ ದಿನಗಳಲ್ಲಿ ರಾಜ್ಯದಿಂದ ಅಯೋದ್ಯೆಗೆ ತೆರಳುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನವೊಂದನ್ನು ನಿರ್ಮಿಸಲು ಭೂಮಿ ಒದಗಿಸುವ ಬಗ್ಗೆ ಶೀಘ್ರವೇ ಸೂಕ್ತಕ್ರಮ ಕೈಗೊಳ್ಳುವ ಭರವಸೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನೀಡಿದ್ದಾರೆ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಅಲ್ಲಿನ ಮುಖ್ಯಮಂತ್ರಿಯನ್ನು ಸೋಮವಾರ ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಮಾತನಾಡುವ ವೇಳೆ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನ ನಿರ್ಮಾಣಕ್ಕೆ ಭೂಮಿ ಒದಗಿಸುವಂತೆ ಬರೆದ ಮನವಿ ಪತ್ರದ ಕುರಿತು ಪ್ರಸ್ತಾಪಿಸಿದಾಗ ಆದಿತ್ಯನಾಥ್ ಅವರು ಈ ಭರವಸೆ ನೀಡಿದರು ಎಂದವರು ತಿಳಿಸಿದರು.
ಬಹಳಷ್ಟು ರಾಜ್ಯಗಳು ಈ ಬಗ್ಗೆ ಮನವಿ ಮಾಡಿದ್ದು, ಆದಷ್ಟು ಶೀಘ್ರ ಭೂಮಿಯನ್ನು ಮಂಜೂರು ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಶ್ರೀವಿಶ್ವಪ್ರಸನ್ನತೀರ್ಥರು ಹೇಳಿದರು.
ಉಡುಪಿ ಶ್ರೀಕೃಷ್ಣ ಮಠಕ್ಕೆ ಹಾಗೂ ನೀಲಾವರದಲ್ಲಿ ಪೇಜಾವರ ಮಠದ ವತಿಯಿಂದ ನಡೆಯುತ್ತಿರುವ ಗೋಶಾಲೆಗೂ ಭೇಟಿ ನೀಡುವಂತೆ ಪೇಜಾವರ ಶ್ರೀಗಳು, ಉತ್ತರ ಪ್ರದೇಶ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರೊಂದಿಗಿನ ತಮ್ಮ ಭೇಟಿಯನ್ನು ಅವರು ಸ್ಮರಿಸಿಕೊಂಡರು ಎಂದು ಪೇಜಾವರಶ್ರೀ ತಿಳಿಸಿದರು.