ಉಪ್ಪಿನಂಗಡಿ: ಬೈಕ್ ಗೆ ಟಿಪ್ಪರ್ ಢಿಕ್ಕಿ; ಬೈಕ್ ಸವಾರ ಮೃತ್ಯು
ಉಪ್ಪಿನಂಗಡಿ: ಟಿಪ್ಪರ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಪುಳಿತ್ತಡಿಯ ಸಮೀಪ ಮಂಗಳವಾರ ರಾತ್ರಿ ನಡೆದಿದೆ. ಬಜತ್ತೂರು ಗ್ರಾಮದ ಪಂರ್ದಾಜೆಯ ನಾಗೋಜಿ ನಿವಾಸಿ ಚೆನ್ನಪ್ಪ ಗೌಡರ ಪುತ್ರ ನಾರಾಯಣ ಗೌಡ (40) ಮೃತ ಬೈಕ್ ಸವಾರ.
ಕೃಷಿಕರಾಗಿರುವ ನಾರಾಯಣ ಗೌಡರು ಉಪ್ಪಿನಂಗಡಿಗೆ ಬಂದಿದ್ದು, ಮಂಗಳವಾರ ರಾತ್ರಿ ಸುಮಾರು ಏಳೂವರೆಯ ಸುಮಾರಿಗೆ ಉಪ್ಪಿನಂಗಡಿಯ ಕಡೆಯಿಂದ ಮನೆಗೆ ಹಿಂದಿರುಗುವ ಮಧ್ಯೆ ಪುಳಿತ್ತಡಿ ಬಳಿಯ ಪದಾಳ ದೇವಾಲಯ ಸಮೀಪ ಇವರ ಬೈಕ್ ಗೆ ಪೆರಿಯಡ್ಕ ಕಡೆಯಿಂದ ಹಳೆಗೇಟು ಕಡೆಗೆ ಬರುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಒಂದೂವರೆ ವರ್ಷದ ಗಂಡು ಮಗು, ಪತ್ನಿ, ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ಟಿಪ್ಪರ್ ಚಾಲಕನ ಅತೀ ವೇಗದ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದ್ದು, ಸ್ಥಳಕ್ಕೆ ಬಂದು ಉಪ್ಪಿನಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.