ದ್ವೇಷಿಸುವವರನ್ನು ಪ್ರೀತಿಸುವುದರಿಂದ ಸಮಾಜದ ಸುಧಾರಣೆ: ಮೌಲನಾ ಝಮೀರ್

ಮಲ್ಪೆ, ನ.4: ಅತ್ಯುತ್ತಮ ಸಮುದಾಯವೆಂದು ಕುರಾನ್ ಸಂಬೋಧಿಸಿರುವ ಮುಸ್ಲಿಮರು, ಶಿಕ್ಷಣದ ಅನುಷ್ಠಾನ, ಹಸಿದವರಿಗೆ ಊಟ, ರೋಗಿಗಳಿಗೆ ಶುಶ್ರೂಷೆ, ವಿಧವೆಯರು ಅನಾಥರಿಗೆ, ಅರ್ಹರಿಗೆ ಸಹಾಯ, ಅಗತ್ಯವಿರುವರಿಗೆ ರಕ್ತದಾನ, ದ್ವೇಷಿಸುವವರನ್ನು ಪ್ರೀತಿಯ ಮೂಲಕ ತಿದ್ದಿ ಸಮಾಜದ ಸುಧಾರಣೆ ಕಾಯಕ ಮಾಡಬೇಕಾಗಿದೆ ಎಂದು ಕಿರಿಮಂಜೇಶ್ವರ ಜುಮಾ ಮಸ್ಜಿದ್ ಖತೀಬ್ ಹಾಗೂ ಮಿಲ್ಲತ್ ಫೌಂಡೇಶನ್ನ ಸ್ಥಾಪಕ ಅಧ್ಯಕ್ಷ ಮೌಲಾನಾ ಝಮೀರ್ ಅಹ್ಮದ್ ರಶಾದಿ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಇದರ ಪ್ರವಾದಿ ಮುಹಮ್ಮದ್ ಮನುಕುಲದ ವಿಮೋಚಕ ಎಂಬ ಅಭಿಯಾನದ ಪ್ರಯುಕ್ತ ಮಲ್ಪೆ ಘಟಕ ಆಯೋಜಿಸಲಾದ ಸಾಮುದಾಯಿಕ ಸಭೆಯನ್ನದ್ದೇಶಿಸಿ ಅವರು ಮಾತನಾಡುತಿದ್ದರು.
ನಮಾಝ್, ಉಪವಾಸಗಳಂತಹ ಕರ್ಮಗಳು ನಮಗೆ ಕಡ್ಡಾಯವಾಗಿರು ವುದು ದೇವನ ಜೊತೆಗಿನ ನಮ್ಮ ನಿಕಟತೆ ವೃದ್ಧಿಸಲು. ದೇವನ ಜೊತೆಗಿನ ಗಾಢ ಸಂಬಂಧ ಅಭಿವೃದ್ಧಿಗೊಂಡು ಸ್ವಸಂಸ್ಕರಣೆಯಿಂದಾಗಿ ವ್ಯಕ್ತಿತ್ವ ವಿಕಸನಗೊಂಡು ಅದರ ಪ್ರತಿಫಲನ ಸಮಾಜದಲ್ಲಿ ಪ್ರಜ್ವಲಿ ಸಬೇಕಾಗಿದೆ. ಸದ್ಯ ಪ್ರಚಲಿತವಿರುವ ಸೀಮಿತ ಮತೀಯ ಕಲ್ಪನೆಯು ಇಸ್ಲಾಮಿನದಲ್ಲ. ಸಮಾಜದಲ್ಲಿನ ಸತ್ಕರ್ಮಗಳೇ ಧರ್ಮವಾಗಿದೆ ಎಂಬುದನ್ನು ಪ್ರವಾದಿಯರು ತೋರಿಸಿಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸ್ಥಾನೀಯ ಜಮಾಅತ್ ಅಧ್ಯಕ್ಷ ಉಸ್ತಾದ್ ರಫೀಕ್ ಉಪಸ್ಥಿತರಿದ್ದರು.







