ಕೊರೋನ ನಿಯಂತ್ರಣಕ್ಕೆ ಸೋಂಕು ನಿವಾರಕ ಸುರಂಗ, ನೇರಳಾತೀತ ಕಿರಣಗಳ ಬಳಕೆ ನಿಷೇಧಿಸಿ
ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಹೊಸದಿಲ್ಲಿ, ನ. 5: ಕೊರೋನ ನಿಯಂತ್ರಣದ ಭಾಗವಾಗಿ ಜನರ ಮೇಲೆ ಸೋಂಕು ನಿವಾರಕ ಸುರಂಗಗಳು, ಹೊಗೆ ಹಾಕುವುದು, ಸೋಂಕು ನಿವಾರಕ ಸಿಪಂಡಣೆ, ನೇರಳಾತೀತ ಕಿರಣಗಳ ಬಳಕೆಯನ್ನು ತಿಂಗಳೊಳಗೆ ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ. ಸೋಂಕು ನಿವಾರಕ ಸುರಂಗಗಳ ಸ್ಥಾಪನೆ, ಬಳಕೆ, ಉತ್ಪಾದನೆ ಹಾಗೂ ಜಾಹೀರಾತುಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸುವಂತೆ ಕೋರಿ ಕಾನೂನು ವಿದ್ಯಾರ್ಥಿ ಗುರ್ಸಿಮ್ರಾನ್ ಸಿಂಗ್ ನರುಲಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿತು.
ಸೋಂಕು ನಿವಾರಕ ಸುರಂಗಗಳ ಬಳಕೆಯನ್ನು ಶಿಫಾರಸು ಮಾಡಿಲ್ಲ. ಇದು ಮಾನವನ ಭೌತಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಹಾನಿ ಉಂಟು ಮಾಡುತ್ತದೆ ಎಂದು ಈ ಹಿಂದೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು. ಈ ನಿಲುವಿನ ಹೊರತಾಗಿಯೂ ಇದರ ಬಳಕೆಯ ಮೇಲೆ ನಿಷೇಧ ಹೇರಿಲ್ಲ ಯಾಕೆ ಎಂದು ಸೆಪ್ಟಂಬರ್ 7ರಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ಪ್ರಶ್ನಿಸಿತ್ತು. ಕೊರೋನ ನಿರ್ವಹಣೆಗೆ ಮಾನವನ ಮೇಲೆ ನೇರಳಾತೀತ ಕಿರಣಗಳನ್ನು ಬಳಸುವ ಕುರಿತು ಆರೋಗ್ಯ ಸಚಿವಾಲಯ ಯಾವುದೇ ಸಲಹೆ ಅಥವಾ ಮಾರ್ಗಸೂಚಿಗಳನ್ನು ನೀಡಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ಗೆ ತಿಳಿಸಿದರು.