ಶಿವಮೊಗ್ಗ: ಕೃಷಿ ಮಸೂದೆ ವಿರೋಧಿಸಿ ರೈತರಿಂದ ಹೆದ್ದಾರಿ ಬಂದ್

ಶಿವಮೊಗ್ಗ (ನ.05): ರೈತ ವಿರೋಧಿಯಾಗಿರುವ ಕೃಷಿ ಮಸೂದೆ, ಕಾರ್ಮಿಕ ಮಸೂದೆ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರಿವಾಜ್ಙೆಗಳ ಮೂಲಕ ಜಾರಿಗೆ ತಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರು, ಕೂಲಿ ಕಾರ್ಮಿಕರು ಹಾಗೂ ಡಿಎಸ್ಎಸ್ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಿದರು.
ಅಖಿಲ ಭಾರತ ರೈತ ಸಂಘರ್ಷ ಸಮಿತಿ ಕರೆಯ ಮೇರೆಗೆ ರೈತ ಸಂಘಟನೆಗಳು, ಕರ್ನಾಟಕ ಜನಶಕ್ತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಗಳು (ಅಂಬೇಡ್ಕರ್ ವಾದ) ಗುರುವಾರ ನಗರದ ಎಂ.ಅರ್ ಎಸ್ ನಲ್ಲಿ ಹೆದ್ದಾರಿ ಬಂದ್ ಮಾಡಿ ಸರ್ಕಾರಗಳ ವಿರುದ್ದ ಅಕ್ಷರಶಃ ರಣಕಹಳೆ ಮೊಳಗಿಸಿದವು.
ಕೊರೋನ ಲಾಕ್ ಡೌನ್ ಸಂದರ್ಭವನ್ನು ಬಳಸಿಕೊಂಡು ರೈತರು ಮನೆಯಿಂದ ಹೊರಗಡೆ ಬರದಂತೆ ನಿರ್ಬಂಧ ಹೇರಿ ಜನರ ಬಾಯಿಗೆ ಬಟ್ಟೆ ಕಟ್ಟಿ, ಚರ್ಚೆಗೆ ಅವಕಾಶ ನೀಡದೇ ಸುಗ್ರಿವಾಜ್ಞೆಗಳ ಮೂಲಕ ಕೃಷಿ,ಕಾರ್ಮಿಕ, ಭೂ ಸುಧಾರಣೆ ಕಾಯ್ದೆಗಳನ್ನು ಜಾರಿಗೆ ತಂದಿದೆ. ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯದಾದ್ಯಂತ ಅನ್ನದಾತರು ಬೀದಿಗಿಳಿದು ಹೋರಾಟ ನಡೆಸಿದರೂ ಸರ್ಕಾರ ರೈತರ ಕೂಗನ್ನೆ ಕೇಳದೆ ಸರ್ಕಾರ ಜಾಣ ಕುರುಡತನ ಪ್ರದರ್ಶನ ಮಾಡಿ, ಅನ್ನ ಕೊಡುವ ರೈತರಿಗಿಂತ ಬಂಡವಾಳ ಶಾಹಿಗಳ ಮಾತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಕೊಡುತ್ತಿವೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ತಕ್ಷಣವೇ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆರಂಬಿಸಬೇಕು ಹಾಗೂ ಪಂಜಾಬ್ ಸರ್ಕಾರದಂತೆ ರಾಜ್ಯ ಸರ್ಕಾರವು ಕೃಷಿ ಉತ್ಪನ್ನಗಳನ್ನು ಎಂಎಸ್ಪಿ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಅಪರಾಧವೆಂದು ಘೋಷಿಸಬೇಕು. ಜೊತೆಗೆ ಕೇರಳ ಸರ್ಕಾರದಂತೆ ತರಕಾರಿ ಬೆಳೆಗಳಿಗೆ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ತಮ್ಮ ಜಮೀನುಗಳನ್ನು ದೊಡ್ಡ ದೊಡ್ಡ ಶ್ರೀಮಂತರು ಹಾಗೂ ಭೂ ಮಾಫಿಯಾದವರು ತೋರಿಸುವ ಹಣದ ಆಸೆಗಾಗಿ ಜಮೀನು ಸಂಪೂರ್ಣವಾಗಿ ಕಳೆದುಕೊಂಡು ನಿರಾಶ್ರಿತರಾಗುತ್ತಾರೆ. ಹಾಗಾಗಿ ಈ ಕಾಯ್ದೆಯನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ಟ್ರಾಫಿಕ್ ಜಾಮ್: ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಹೆದ್ದಾರಿ ಬಂದ್ ಗೆ ಮುಕ್ಕಾಲು ತಾಸಿಗೂ ಹೆಚ್ಚು ಟ್ರಾಫಿಕ್ ಜಾಮ್ ಆಗಿತ್ತು. ರೈತರು,ಕೃಷಿ ಕೂಲಿ ಕಾರ್ಮಿಕರು ರಸ್ತೆಗೆ ಅಡ್ಡ ಕುಳಿತಿದ್ದರು. ಇದರಿಂದ ನಾಲ್ಕು ದಿಕ್ಕಿನಿಂದಲೂ ಬರುವ ವಾಹನಗಳು ಒಂದು ಕಿಲೋ ಮೀಟರ್ ವರೆಗೂ ನಿಂತಿದ್ದವು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇದ್ದುದ್ದರಿಂದ ಬಸ್ ಗಳು ಸಂಚರಿಸಲು ತೊಂದರೆಯಾದ ಘಟನೆಯೂ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ಅವಕಾಶ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಎಸ್.ಶಿವಮೂರ್ತಿ, ಇ.ಬಿ.ಜಗದೀಶ್, ಟಿ.ಎಂ. ಚಂದ್ರಪ್ಪ, ಕೆ.ರಾಘವೇಂದ್ರ, ಜ್ಞಾನೇಶ್, ಹಿಟ್ಟೂರು ರಾಜು, ನಾಗರಾಜ್ ಪುರದಾಳ್ ಹಾಗೂ ಪ್ರಮುಖರಾದ ಕೆ.ಎಲ್.ಅಶೋಕ್, ಟಿ.ಹೆಚ್.ಹಾಲೇಶಪ್ಪ, ಶಿವಕುಮಾರ್ ಭಾಗವಹಿಸಿದ್ದರು.







