ಕನ್ನಡ ಕಾಯಕ ವರ್ಷಾಚರಣೆಗೆ ಪ್ರಾಧಿಕಾರದಿಂದ ಹಲವು ಯೋಜನೆಗಳು: ಟಿ.ಎಸ್.ನಾಗಾಭರಣ

ಬೆಂಗಳೂರು, ನ.5: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವ “ಕನ್ನಡ ಕಾಯಕ ವರ್ಷಾಚರಣೆ-2020’’ರ ಲಾಂಛನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಗುರುವಾರ ವಿಧಾನಸೌಧದಲ್ಲಿ ಬಿಡುಗಡೆಗೊಳಿಸುವ ಮೂಲಕ ಕನ್ನಡ ಕಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಒಂದು ವರ್ಷಪೂರ್ತಿ ಅರ್ಥಪೂಣವಾಗಿ ಆಚರಿಸಲು ಹಲವು ಪ್ರತ್ಯೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಭಾಗಿತ್ವ ಬಹಳ ಮುಖ್ಯವಾಗಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಾಡು-ನುಡಿ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಜ್ಯದ ಪ್ರಾತಿನಿಧಿಕ ಸಂಸ್ಥೆಯಾಗಿ, ಕನ್ನಡವನ್ನು ಉಳಿಸಿ, ಬೆಳೆಸುವ ಸಂಬಂಧ ರಚನಾತ್ಮಕ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಕನ್ನಡ ಭಾಷಾ ಬೆಳವಣಿಗೆಯ ಹಿತದೃಷ್ಟಿಯಿಂದ ಆಡಳಿತದಲ್ಲಿ ಕನ್ನಡ, ಶಿಕ್ಷಣದಲ್ಲಿ ಕನ್ನಡ, ತಂತ್ರಜ್ಞಾನದಲ್ಲಿ ಕನ್ನಡ, ನ್ಯಾಯಾಂಗದಲ್ಲಿ ಕನ್ನಡ, ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಹೊರದೇಶಗಳಲ್ಲಿ ಕನ್ನಡ ಪಸರಿಸುವಿಕೆ ಹೀಗೆ ಹತ್ತು-ಹಲವು ಉಪಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.
ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಪಾರದರ್ಶಕ ಆಡಳಿತಕ್ಕೆ ಚಾಲನೆ ನೀಡಲಾಗಿದೆ. ಅದೇ ರೀತಿ ತಂತ್ರಜ್ಞಾನ ಆಡಳಿತದಲ್ಲಿ ಕನ್ನಡವನ್ನು ಹೆಚ್ಚೆಚ್ಚು ಬಳಸುವ ಮೂಲಕ ಕನ್ನಡ ಭಾಷೆಗೆ ವಿಶ್ವಮಾನ್ಯತೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ನಾಗಾಭರಣ ಹೇಳಿದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಮತ್ತಷ್ಟು ಸಮೃದ್ಧ/ವಿಸ್ತಾರಗೊಳಿಸಲು ಕನ್ನಡವನ್ನು ವಿವಿಧ ವಯೋಮಾನದ, ವಿವಿಧ ರಂಗಗಳ ಜನರು ಸುಲಭವಾಗಿ ಕಲಿಯುವಂತಾಗಲು ಆರಂಭಿಕ ಕ್ರಮವಾಗಿ ಇ-ಕನ್ನಡ ಕಲಿಕಾ ಅಕಾಡೆಮಿ ಪೋರ್ಟಲ್ ಒಂದನ್ನು ಆರಂಭಿಸಲಾಗಿದ್ದು ಇಲ್ಲಿ ಕನ್ನಡ ಕಲಿಕೆ, ಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ಕಾಲಕಾಲಕ್ಕೆ ಸಂಗ್ರಹಿಸಿ ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದರು.
ರಾಜ್ಯ ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗಲು ಹಾಗೂ ಅವರಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶ ಸಿಗುವ ನಿಟ್ಟಿನಲ್ಲಿ “ಕನ್ನಡ ಭಾಷಾ ಕೌಶಲ್ಯ ಆನ್ಲೈನ್ ಪರೀಕ್ಷೆ'' ವ್ಯವಸ್ಥೆಯನ್ನು ರೂಪಿಸಲಾಗಿದೆ. ಬಹುಮುಖ್ಯವಾಗಿ ಕರ್ನಾಟಕ.ಭಾರತ (ಕರ್ನಾಟಕ[ಡಾಟ್]ಭಾರತ) ಎಂಬ ಯು.ಆರ್.ಎಲ್ನ್ನು ಭಾರತ ಸರಕಾರದ ನ್ಯಾಶನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾವು (ನಿಕ್ಸಿ) ರಾಜ್ಯ ಸರಕಾರದ ಬಳಕೆಗಾಗಿ ಮೀಸಲಿಟ್ಟಿದ್ದು ಅದನ್ನು ಕೂಡಲೇ ಪಡೆಯುವ ದೃಷ್ಟಿಯಿಂದ ಇ–ಆಡಳಿತ ಇಲಾಖೆಯ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಇದು ಜಾರಿಯಾದಲ್ಲಿ ಇ-ಮೇಲ್ ವಿಳಾಸಗಳನ್ನು ಕನ್ನಡದಲ್ಲಿಯೇ ರಚಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ನೂತನ ಶಿಕ್ಷಣ ನೀತಿಯನ್ವಯ ಪ್ರಾಥಮಿಕ ಹಂತದ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ರೂಪಿಸಲು ಅಗತ್ಯ ಕಾನೂನು ಜಾರಿಗೊಳಿಸುವುದು ಹಾಗೂ ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಹಂತ ಹಂತವಾಗಿ ಜಾರಿಗೊಳಿಸಲು ಕಾರ್ಯಕ್ರಮ ರೂಪಿಸಲಾಗುವುದು, ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡುವ ಮಸೂದೆ ರೂಪಿಸುವ ಮೂಲಕ ಕೊರೋನದಿಂದ ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರಿಗೆ ಜೀವನೋತ್ಸಾಹ ತುಂಬುವುದು ಪ್ರಾಧಿಕಾರದ ಆಶಯವಾಗಿದೆ ಎಂದು ನಾಗಾಭರಣ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ವಿಜಯಲಕ್ಷ್ಮಿ ಬಾಳೆಕುಂದ್ರಿ, ಅಬ್ದುಲ್ ರಹಮಾನ್ ಪಾಶಾ, ಡಾ.ಗುಬ್ಬಿಗೂಡು ರಮೇಶ್, ಡಾ.ಕಿಶೋರ್, ಸುರೇಶ್ ಬಡಿಗೇರ್, ಕಬ್ಬಿನಾಲೆ ವಸಂತ ಭಾರದ್ವಾಜ್, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಹಾಗೂ ಕನ್ನಡ ಕಾಯಕ ಪಡೆಯ ಎಲ್ಲ ಜಿಲ್ಲೆಯ ಪದಾಧಿಕಾರಿಗಳು ಜಾಲತಾಣ ಸಭೆಯಲ್ಲಿ ಪಾಲ್ಗೊಂಡಿದ್ದರು.







