“ಕೋವಿಡ್ ಪ್ರಕರಣಗಳಲ್ಲಿ ಅಸಾಧಾರಣ ಏರಿಕೆಯಿಲ್ಲ, ಪೂರ್ಣ ಪರಿಣಾಮ ಗೊತ್ತಾಗಲು ಇನ್ನೂ ಸಮಯ ಬೇಕು”
ನೀತಿ ಆಯೋಗದ ಸದಸ್ಯ ಡಾ.ಪಾಲ್
ಹೊಸದಿಲ್ಲಿ,ನ.5: ಹಬ್ಬಗಳ ಋತುವಿನ ನಡುವೆ ಕಳೆದೆರಡು ವಾರಗಳಲ್ಲಿ ಕೊರೋನ ವೈರಸ್ ಪ್ರಕರಣಗಳಲ್ಲಿ ಅಸಾಧಾರಣ ಏರಿಕೆ ಕಂಡು ಬಂದಿಲ್ಲ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಅವರು ತಿಳಿಸಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ವೈರಸ್ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡಲಿದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
‘ಹಬ್ಬಗಳ ಮೊದಲ ಹಂತ ಮುಗಿದಿದೆ. ನಮ್ಮ ಮುಂದಿರುವ ಮಾಹಿತಿಗಳು ಕೊರೋನ ವೈರಸ್ಗೆ ಸಂಬಂಧಿಸಿದಂತೆ ಜನರು ಎಚ್ಚರಿಕೆ ವಹಿಸಿದ್ದಾರೆ ಎನ್ನುವುದನ್ನು ತೋರಿಸುತ್ತಿವೆ. ಆದರೂ ನವರಾತ್ರಿ,ದುರ್ಗಾಪೂಜಾ ಮತ್ತು ದಸರಾ ಸಂದರ್ಭಗಳಲ್ಲಿ ರೋಗ ಹರಡುವಿಕೆಗೆ ಸಂಬಂಧಿಸಿದಂತೆ ಪೂರ್ಣ ಪರಿಣಾಮ ಗೊತ್ತಾಗಲು ಇನ್ನಷ್ಟು ಸಮಯ ಬೇಕು. ಪ್ರಕರಣಗಳು ವರದಿಯಾಗಲು 10ರಿಂದ 14 ದಿನಗಳು ಬೇಕಿರುವುದರಿಂದ ಸರಕಾರವು ಪರಿಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದೆ ’ ಎಂದು ಡಾ.ಪಾಲ್ ತಿಳಿಸಿದರು.
ಹಬ್ಬಗಳ ಋತುವಿನ್ನೂ ಮುಗಿದಿಲ್ಲ,ದೀಪಾವಳಿ ಮತ್ತು ಕ್ರಿಸ್ಮಸ್ನಂತಹ ಸಂದರ್ಭಗಳು ಮುಂದಿವೆ ಎಂದ ಅವರು,ಮಾಸ್ಕ್ ಧಾರಣೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮಹತ್ವಕ್ಕೆ ಒತ್ತು ನೀಡಿದರು.
ಕಳೆದ 24 ಗಂಟೆಗಳಲ್ಲಿ 50,210 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣ ಸಂಖ್ಯೆ ಗುರುವಾರ 83,64,086ಕ್ಕೇರಿದೆ. ಈ ಅವಧಿಯಲ್ಲಿ ಸೋಂಕಿನಿಂದ 704 ಜನರು ಸಾವನ್ನಪ್ಪಿದ್ದು,ಒಟ್ಟು ಸಾವುಗಳ ಸಂಖ್ಯೆ 1,24,315ಕ್ಕೇರಿದೆ. 5,27,962 ಸಕ್ರಿಯ ಪ್ರಕರಣಗಳಿದ್ದು, 77,11,809 ರೋಗಿಗಳು ಗುಣಮುಖರಾಗಿದ್ದಾರೆ.