ಶಿವಾನಂದ ಉಕ್ಕಿನ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಧರಣಿ

ಬೆಂಗಳೂರು, ನ.6: ನಗರದ ಶಿವಾನಂದ ವೃತ್ತ ಉಕ್ಕಿನ ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಆಮ್ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಶಿವಾನಂದ ವೃತ್ತದ ಬಳಿ ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು, ಯೋಜನೆ ಕಾರ್ಯಾರಂಭ ಮಾಡಿ ಅದನ್ನು ಕಾಲಾವಧಿಯೊಳಗೆ ಮುಗಿಸದೇ ಪ್ರತಿ ವರ್ಷ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿಕೊಂಡು, ಜನರ ತೆರಿಗೆ ಹಣ ನುಂಗುವುದನ್ನೇ ಅಭ್ಯಾಸ ಮಾಡಿಕೊಂಡಿರುವುದಕ್ಕೆ ತಾಜಾ ಉದಾಹರಣೆ ಈ ಯೋಜನೆಯಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಈ ವೇಳೆ ಮಾತನಾಡಿದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಸುಮಾರು 3 ವರ್ಷಗಳ ಹಿಂದೆ ಕಾರ್ಯಾದೇಶವಾದಾಗಿನಿಂದ ಕೇವಲ ಶೇ 40 ರಷ್ಟು ಕಾಮಗಾರಿ ಪೂರ್ಣಗೊಂಡಿರುವುದನ್ನು ನೋಡಿದರೆ ಬಿಬಿಎಂಪಿಯ ಆಡಳಿತ ವೈಖರಿಗೆ ಕನ್ನಡಿಯಾಗಿದೆ ಎಂದರು.
ಈ ಕಾಮಗಾರಿಯ ಅವಧಿ 18 ತಿಂಗಳಲ್ಲಿ ಮುಗಿಸಬೇಕಿತ್ತು, ಈಗಾಗಲೇ 27 ತಿಂಗಳುಗಳು ಕಳೆದಿವೆ. 2020 ಮುಗಿಯುತ್ತಾ ಬಂದರೂ ಅದರ ಸುಳಿವಿಲ್ಲ. ಈ ಉಕ್ಕಿನ ಸೇತುವೆಯನ್ನು ಪ್ರಾರಂಭಿಸುವಾಗ ಅಂದಾಜು ಮಾಡಿದ್ದ ಯೋಜನಾ ವೆಚ್ಚ 19 ಕೋಟಿ. ಈಗಾಗಲೇ ಎರಡು ಬಾರಿ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿದ್ದು 60 ಕೋಟಿಗೆ ಮುಟ್ಟಿದೆ. ಇದೇ ರೀತಿ ಎಲ್ಲಾ ಕಾಮಗಾರಿಗಳನ್ನು ಕಾಲಾವಧಿಯಲ್ಲಿ ಮುಗಿಸದೆ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಮೊದಲು ಮೇಲ್ಸೇತುವೆ ಉದ್ದವನ್ನು 326 ಮೀ.ಗೆ ನಿಗದಿ ಮಾಡಲಾಗಿತ್ತು. ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷದ ನಂತರ ರೇಸ್ಕೋರ್ಸ್ ರಸ್ತೆ ದಿಕ್ಕಿಗೆ ಮೇಲ್ಸೇತುವೆ ಉದ್ದವನ್ನು 493 ಮೀ.ಗೆ ಏರಿಕೆ ಮಾಡಿದ್ದು ಎಂಬುದು ಏಕೆ ಎಂದು ಅಧಿಕಾರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಸಂಚಾರ ದಟ್ಟಣೆಯಿಂದ ಕಿರಿಕಿರಿ ಅನುಭವಿಸುತ್ತಿರುವ ಜನರಿಗೆ ಉತ್ತಮ ಸೌಕರ್ಯ ಒದಗಿಸುತ್ತೇವೆ ಎಂದು ಆರಂಭಿಸುವ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮುಂದೂಡಿ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿ, ಹಣ ನುಂಗುವ ಹುನ್ನಾರವಾಗಿದೆ. ಈ ಕೂಡಲೇ ಈ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಮುಗಿದಿರುವ ಕಾಮಗಾರಿಯ ಗುಣಮಟ್ಟ ಸಹ ಕಳಪೆ ಆಗಿದ್ದು ಈಗಾಗಲೇ ಹಾಕಿರುವ ಉಕ್ಕಿನ ಕಂಬಗಳ ಸಾಮರ್ಥ್ಯವೂ ಸಹ ಅನುಮಾನಸ್ಪದವಾಗಿದ್ದು ಅರ್ಧ ಕಾಮಗಾರಿ ಮುಗಿಸಿ ನಿಲ್ಲಿಸಿರುವ ಕಂಬಗಳು ತುಕ್ಕು ಹಿಡಿದಿವೆ. ಬಿಬಿಎಂಪಿ ಹಾಗೂ ರಾಜ್ಯ ಸರಕಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸದಿದ್ದರೆ ಎಲ್ಲಾ ಅಪೂರ್ಣ ಕಾಮಗಾರಿಗಳ ಎದುರು ಸರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.







