ಬೆಳ್ತಂಗಡಿ ನಪಂ: ಬಿಜೆಪಿಯ ರಜನಿ ಕುಡ್ವ ಅಧ್ಯಕ್ಷೆ, ಜಯಾನಂದ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
![ಬೆಳ್ತಂಗಡಿ ನಪಂ: ಬಿಜೆಪಿಯ ರಜನಿ ಕುಡ್ವ ಅಧ್ಯಕ್ಷೆ, ಜಯಾನಂದ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಬೆಳ್ತಂಗಡಿ ನಪಂ: ಬಿಜೆಪಿಯ ರಜನಿ ಕುಡ್ವ ಅಧ್ಯಕ್ಷೆ, ಜಯಾನಂದ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ](https://www.varthabharati.in/sites/default/files/images/articles/2020/11/7/266433-1604736955.gif)
ಬೆಳ್ತಂಗಡಿ, ನ.7: ಬೆಳ್ತಂಗಡಿ ನಗರ ಪಂಚಾಯತ್ ನೂತನ ಅಧ್ಯಕ್ಷರಾಗಿ ಬಿಜೆಪಿಯ ರಜನಿ ಕುಡ್ವ ಹಾಗೂ ಉಪಾಧ್ಯಕ್ಷರಾಗಿ ಜಯಾನಂದ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ತುಳಸಿ ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ಪಟ್ಟಣ ಪಂಚಾಯತದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯು ಚುನಾವಣಾಧಿಕಾರಿ ತಹಶೀಲ್ದಾರ್ ಮಹೇಶ್ ಜೆ. ಉಪಸ್ಥಿತಿಯಲ್ಲಿ ನ.7 ರಂದು ನಡೆಯಿತು.
ಪಂಚಾಯತದ ಅಧ್ಯಕ್ಷ ಗಾದಿ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಗಾದಿಯನ್ನು ಸಾಮಾನ್ಯ ಸ್ಥಾನಕ್ಕೆ ಮೀಸಲಿರಿಸಿ ಸರಕಾರ ಆದೇಶ ಹೊರಡಿಸಿದ್ದು. ಅಧ್ಯಕ್ಷತೆಗೆ ಬಿಜೆಪಿಯಿಂದ ರಜನಿ ಕುಡ್ವ ಹಾಗೂ ಉಪಾಧ್ಯಕ್ಷತೆಗೆ ಜಯಾನಂದ ಗೌಡ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ರಜನಿ ಕುಡ್ವ ಅಧ್ಯಕ್ಷರಾಗಿ ಹಾಗೂ ಜಯಾನಂದ ಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದರು. ಪಟ್ಟಣ ಪಂಚಾಯತ್ ನಲ್ಲಿ 7 ಬಿಜೆಪಿ ಹಾಗೂ 4 ಕಾಂಗ್ರೆಸ್ ಸದಸ್ಯರಿದ್ದು, ಬಿಜೆಪಿಗೆ ಬಹುಮತ ಇರುವುದರಿಂದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷತೆಗೆ ಯಾವುದೇ ನಾಮಪತ್ರ ಸಲ್ಲಿಸಲಿಲ್ಲ.