ನವಜಾತ ಶಿಶುಗಳು ಅದಲು ಬದಲು: ಪ್ರಕರಣ ಠಾಣೆಯಲ್ಲಿ ಸುಖಾಂತ್ಯ

ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳು ಅದಲು ಬದಲಾದ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಅನಾರೋಗ್ಯದಿಂದ ಅಸುನೀಗಿದ್ದ ಮಗುವನ್ನು ಬೇರೆ ಪೋಷಕರಿಗೆ ಹಸ್ತಾಂತರಿಸಿ ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದಾವಣಗೆರೆ ಜಿಲ್ಲೆ ಕುಣೆಬೆಳಕೆರೆ ನಿವಾಸಿಗಳಾದ ಸುಮಾ ಅಂಜನಪ್ಪ ಎಂಬ ಮಹಿಳೆ ಕಳೆದ ಸೋಮವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದೇ ದಿನ ಸೊರಬದ ಸುಮಾ ಗೋಪಾಲಪ್ಪ ಎಂಬ ಮಹಿಳೆಗೆ ಹೆಣ್ಣು ಮಗು ಜನಿಸಿದೆ. ಇಬ್ಬರ ಮಕ್ಕಳನ್ನು ಆರೋಗ್ಯದ ದೃಷ್ಟಿಯಿಂದ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು.
ಶುಕ್ರವಾರ ಕುಣೆಬೆಳಕೆರೆಯ ಸುಮಾ ಅಂಜನಪ್ಪನವರ ಗಂಡು ಮಗು ಮೃತಪಟ್ಟಿದೆ. ಸುಮಾ ಗೋಪಾಲಪ್ಪ ನವರ ಹೆಣ್ಣು ಮಗು ಚಿಕಿತ್ಸೆಯಲ್ಲಿತ್ತು. ಆದರೆ ಗಂಡು ಮಗು ಮೃತಪಡುತ್ತಿದ್ದಂತೆಯೇ ಆಸ್ಪತ್ರೆಯ ಸಿಬ್ಬಂದಿ ಮೃತಪಟ್ಟ ಮಗುವನ್ನು ಸೊರಬದ ಸುಮಾ ಗೋಪಾಲಪ್ಪರಿಗೆ ನೀಡಿ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತ ಮಗು ನೋಡಲೆಂದು ತೀವ್ರ ನಿಗಾ ಘಟಕಕ್ಕೆ ಹೋದಾಗ ಸುಮಾ ಅಂಜನಪ್ಪನವರ ಪೋಷಕರಿಗೆ ವೈದ್ಯರು, ನಿಮ್ಮ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಮೃತಪಟ್ಟ ಮಗುವನ್ನು ನೀಡಿ ಎಂದು ಕೇಳಿದಾಗ ಆಸ್ಪತ್ರೆಯ ಸಿಬ್ಬಂದಿ ಮಾಡಿದ ಎಡವಟ್ಟು ಗೊತ್ತಾಗಿದೆ.
ಅದಾಗಲೇ ಸೊರಬದ ಸುಮಾ ಗೋಪಾಲಪ್ಪನವರು ಮಗುವನ್ನು ತಮ್ಮೂರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಆದರೆ ಅವರ ಮಗು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದುದು ಬಳಿಕ ಗೊತ್ತಾಗಿದೆ. ಇದರಿಂದ ಕೋಪಗೊಂಡ ಸುಮಾ ಅಂಜನಪ್ಪ ಪೋಷಕರು ತಮಗೆ ಮಗು ಬೇಕು ಎಂದು ದೊಡ್ಡಪೇಟೆ ಪೊಲೀಸ್ ಠಾಣೆ ಮೇಟ್ಟಿಲೇರಿ ಪ್ರಕರಣ ದಾಖಲಿಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.
ಈ ವೇಳೆ ಮಧ್ಯಪ್ರವೇಶಿಸಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಮೃತ ಮಗುವಿನ ಕಡೆಯವರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.







