ಮಂಗಳೂರು: ಬಿಸಿಯೂಟ ನೌಕರರ ಪ್ರತಿಭಟನೆ

ಮಂಗಳೂರು, ನ.9: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ, ರೈತ ವಿರೋಧಿ ಮತ್ತು ಜನ ವಿರೋಧಿ ನೀತಿಗಳ ವಿರುದ್ಧ ನ.26ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ನಗರದ ಮಂಗಳೂರು ಮಿನಿ ವಿಧಾನ ಸೌಧದ ಮುಂದೆ ಸೋಮವಾರ ಬಿಸಿಯೂಟ ನೌಕರರಿಂದ ಪ್ರತಿಭಟನೆ ನಡೆಯಿತು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ ಬಿಸಿಯೂಟ ನೌಕರರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ದುಡಿದಿರುವ ದಿನಗಳ ವೇತನ ಪಡೆಯಬೇಕಾದರೂ ಹೋರಾಟ ಮಾಡಬೇಕಾದ ಸ್ಥಿತಿ ಇದೆ. ವೇತನ ಏರಿಕೆ ಆಗಬೇಕು. ಸಾಮಾಜಿಕ ಭದ್ರತೆ ಒದಗಿಸಬೇಕು. ಸ್ಕೀಂ ಕಾರ್ಮಿಕರನ್ನು ಪರಿಗಣಿಸಬೇಕು ಎಂದು ಹಲವಾರು ಹಂತದ ಹೋರಾಟ ನಡೆಸಿದರೂ ಸರಕಾರಗಳು ಸ್ಪಂದಿಸುತ್ತಿಲ್ಲ.ಬದಲಾಗಿ ಎಲ್ಲಾ ರಂಗ ಗಳನ್ನು ಖಾಸಗೀಕರಿಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ಗಗನಕ್ಕೆ ಮುಟ್ಟಿದೆ. ವಿದ್ಯುತ್ ದರಿ ಏರಿಕೆ, ಪ್ರಯಾಣ ದರ, ಅಡುಗೆ ಅನಿಲ ದರ, ಅಗತ್ಯ ವಸ್ತುಗಳ ದರ ಏರಿಸಲಾಗಿದೆ.ಕಾರ್ಮಿಕ ಕಾನೂನು,ರೈತರ ಕಾನೂನುಗಳನ್ನು ಕಾರ್ಪೋರೇಟ್ ಸಂಸ್ಥೆಗಳ ಪರ ತಿದ್ದುಪಡಿ ಮಾಡಲಾ ಗುತ್ತಿದೆ. ದೇಶ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ದೇಶದ ಕಾರ್ಮಿಕ ಸಂಘಟನೆಗಳು ನವೆಂಬರ್ 26ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು ಎಲ್ಲಾ ವಿಭಾಗದ ಜನತೆ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಸಂಘಟನೆಯ ನಾಯಕಿಯರಾದ ರೇಖಲತಾ, ರತ್ನಮಾಲಾ, ಆಶಾ, ಶೋಭಾ, ಲಲಿತಾ, ಅರುಣಾ, ಉಮಾವತಿ, ಯಶೋಧಾ, ಚಂಚಲಾಕ್ಷಿ, ವಿಶಾಲಾಕ್ಷಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು
ಜಿಲ್ಲಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಜೆಎಸ್ಎಸ್ ಮುಂದಾಳು ಭಾರತಿ ಬೋಳಾರ ಮಾತನಾಡಿದರು. ಗಿರಿಜಾ ಸ್ವಾಗತಿಸಿದರು. ಭವ್ಯಾ ವಂದಿಸಿದರು.






_0.jpeg)


