ಬೆಂಗಳೂರಿನಲ್ಲಿ ಹೊತ್ತಿ ಉರಿದ ಕೆಮಿಕಲ್ ಕಾರ್ಖಾನೆ: ವಾಹನಗಳು ಬೆಂಕಿಗೆ ಆಹುತಿ
![ಬೆಂಗಳೂರಿನಲ್ಲಿ ಹೊತ್ತಿ ಉರಿದ ಕೆಮಿಕಲ್ ಕಾರ್ಖಾನೆ: ವಾಹನಗಳು ಬೆಂಕಿಗೆ ಆಹುತಿ ಬೆಂಗಳೂರಿನಲ್ಲಿ ಹೊತ್ತಿ ಉರಿದ ಕೆಮಿಕಲ್ ಕಾರ್ಖಾನೆ: ವಾಹನಗಳು ಬೆಂಕಿಗೆ ಆಹುತಿ](https://www.varthabharati.in/sites/default/files/images/articles/2020/11/10/266830-1605022086.jpg)
ಬೆಂಗಳೂರು, ನ.10: ರಾಜಧಾನಿ ಬೆಂಗಳೂರಿನ ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ, ದಟ್ಟ ಹೊಗೆ ಆವರಿಸಿ ಆತಂಕ ಸೃಷ್ಟಿಸಿದ್ದ ಘಟನೆ ಮಂಗಳವಾರ ನಡೆದಿದೆ.
ಹೊಸಗುಡ್ಡದಹಳ್ಳಿಯ ಬಾಪೂಜಿನಗರದ ಮೊದಲನೆ ಮುಖ್ಯರಸ್ತೆಯಲ್ಲಿರುವ ಕೆಮಿಕಲ್ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದ್ದು, ಈ ವೇಳೆ ನಾಲ್ಕು ಮಂದಿ ಕಾರ್ಮಿಕರು ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಐದು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮೊದಲು ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿದ್ದರಿಂದ ಸ್ಥಳೀಯರು ಕೆಲಕಾಲ ಆತಂಕಗೊಂಡರು.
ಫ್ಯಾಕ್ಟರಿ ಬಳಿ ನಿಲ್ಲಿಸಲಾಗಿದ್ದ ವಾಹನಗಳು ಸಹ ಬೆಂಕಿಗೆ ಆಹುತಿಯಾಗಿವೆ. ಬೃಹತ್ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದರಿಂದ ಅಕ್ಕಪಕ್ಕದ ನಿವಾಸಿಗಳನ್ನು ಪೊಲೀಸರು ಸ್ಥಳಾಂತರಿಸಿದರು. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ತೆರಳಿ ಪರಿಶೀಲಿಸಿದರು.
ಕಾರ್ಖಾನೆಯಲ್ಲಿ ಸ್ಯಾನಿಟೈಜರ್, ಥಿನ್ನರ್ ತಯಾರಿಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಥಿನ್ನರ್, ಸ್ಯಾನಿಟೈಸರ್ ತಯಾರಿಸುವ ಕೆಮಿಕಲ್ ಗೋಡೌನ್ ಇದಾಗಿದೆ. ಕೆಮಿಕಲ್ ಪ್ರಾಡಕ್ಟ್ ಇರೋದರಿಂದ ಬೆಂಕಿ ತೀವ್ರಗತಿಯಲ್ಲಿ ವ್ಯಾಪಿಸಿದೆ. 24 ಅಗ್ನಿ ಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆದಿದ್ದು, 100ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.
-ಅಮರ್ ಕುಮಾರ್ ಪಾಂಡೆ, ಡಿಜಿಪಿ, ಅಗ್ನಿಶಾಮಕ ದಳ
ಮಾಲಕ ಪರಾರಿ ?
ಸುಮಾರು 30 ವರ್ಷಗಳಿಂದ ಸುಜನ್ ರಾಜ್ ಎಂಬುವರು ರೇಖಾ ಹೆಸರಿನಲ್ಲಿ ಈ ಕಾರ್ಖಾನೆಯಲ್ಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದರು. ಸದ್ಯ ಮಾಲಕನ ಮೊಬೈಲ್ ಸಂಪರ್ಕ ಕಡಿತವಾಗಿದ್ದು, ಪರಾರಿಯಾಗಿರುವ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಬೆಂಕಿ ಅವಘಡಕ್ಕೆ ಅಂಗಡಿ, ವಾಹನ ಭಸ್ಮ
ಅಗ್ನಿ ಅವಘಡದಿಂದ ಕಾರ್ಖಾನೆ ಪಕ್ಕದಲ್ಲಿದ್ದ ಕರಕುಶಲ ವಸ್ತುಗಳ ಅಂಗಡಿ ಸುಟ್ಟುಹೋಗಿದೆ. ಸುಮಾರು 300 ಕುರ್ಚಿಗಳು ಸೇರಿದಂತೆ ಹಲವು ರೀತಿಯ ಪೀಠೋಪಕರಣ ಭಸ್ಮವಾಗಿದೆ. 32ಕ್ಕೂ ಅಧಿಕ ವಾಹನಗಳು, ಕೆಲ ಮನೆಗಳಲ್ಲಿನ ವಸ್ತುಗಳು ನಾಶವಾಗಿವೆ.
ಪಾರಿವಾಳಗಳ ರಕ್ಷಣೆ
ಘಟನೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ 35ಕ್ಕೂ ಹೆಚ್ಚಿನ ಪಾರಿವಾಳಗಳನ್ನು ರಕ್ಷಣೆ ಮಾಡಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.