"ಕೋವಿಡ್ ಕಾರಣದಿಂದಾಗಿ ಸೋಲುತ್ತಿದ್ದೇವೆ": ಮತ ಎಣಿಕೆ ಆರಂಭದಲ್ಲಿಯೇ ಸೋಲೊಪ್ಪಿಕೊಂಡಿದ್ದ ಜೆಡಿಯು ನಾಯಕ
ಪಾಟ್ನಾ: ಬಿಹಾರ ಚುನಾವಣೆಯ ಮತ ಎಣಿಕೆ ಆರಂಭವಾಗಿ ಎರಡು ಗಂಟೆಗಳಾಗುವಷ್ಟರಲ್ಲಿ ಆರಂಭಿಕ ಹಂತದಲ್ಲಿ ಮಹಾಮೈತ್ರಿ ಕೂಟಕ್ಕೆ ಅಲ್ಪ ಮುನ್ನಡೆಯಿದೆ ಎಂದು ತಿಳಿದು ಬರುತ್ತಲೇ ಪಕ್ಷದ ನಾಯಕ ಕೆ ಸಿ ತ್ಯಾಗಿ ಸೋಲೊಪ್ಪಿಕೊಂಡಂತೆ ಕಂಡಿತ್ತು ಹಾಗೂ ತಮ್ಮ ಪಕ್ಷದ ಸೋಲಿಗೆ ಕೋವಿಡ್ ಸಾಂಕ್ರಾಮಿಕವನ್ನು ಅವರು ದೂರಿದ್ದರು.
"ನಾವು ಕೋವಿಡ್-19 ಪರಿಣಾಮದಿಂದಾಗಿಯೇ ಸೋಲುತ್ತಿದ್ದೇವೆ,'' ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಅವರು ಹೇಳಿದ್ದಾರೆ. "ಒಂದು ವರ್ಷದ ಹಿಂದೆ ಆರ್ ಜೆ ಡಿ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗಳಿಸುವುದು ಸಾಧ್ಯವಾಗಿರಲಿಲ್ಲ,'' ಎಂದು ಅವರು ಹೇಳಿಕೊಂಡರು. ಬಿಹಾರ ಸಿಎಂ ಹಾಗೂ ವಿಪಕ್ಷಗಳ ಕುರಿತು ಪ್ರತಿಕ್ರಿಯಿಸಿದ ಅವರು "ಬ್ರ್ಯಾಂಡ್ ನಿತೀಶ್ ಕುಮಾರ್ ಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಬ್ರ್ಯಾಂಡ್ ಆರ್ ಜೆ ಡಿಗೆ ಯಾವುದೇ ಸೇರ್ಪಡೆಯಾಗಿಲ್ಲ,'' ಎಂದಿದ್ದರು.
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ್ ಜನಶಕ್ತಿ ಪಕ್ಷವನ್ನೂ ಟೀಕಿಸಿದ ಅವರು ಆ ಪಕ್ಷಕ್ಕೆ ಬಿಹಾರ ರಾಜಕೀಯದಲ್ಲಿ ಯಾವುದೇ ಅಸ್ತಿತ್ವವಿಲ್ಲ ಎಂದಿದ್ದರು.