8 ಗೋಶಾಲೆಗೆ 16 ಲಕ್ಷ ರೂ. ಅನುದಾನ: ಡಿಸಿ ರಾಜೇಂದ್ರ
![8 ಗೋಶಾಲೆಗೆ 16 ಲಕ್ಷ ರೂ. ಅನುದಾನ: ಡಿಸಿ ರಾಜೇಂದ್ರ 8 ಗೋಶಾಲೆಗೆ 16 ಲಕ್ಷ ರೂ. ಅನುದಾನ: ಡಿಸಿ ರಾಜೇಂದ್ರ](https://www.varthabharati.in/sites/default/files/images/articles/2020/11/10/266916-1605024686.jpg)
ಮಂಗಳೂರು, ನ.10: ಪ್ರಸಕ್ತ ವರ್ಷ ಸಹಾಯಧನ ಕೋರಿ 13 ಗೋಶಾಲೆಗಳು ಅರ್ಜಿ ಸಲ್ಲಿಸಿದ್ದು, ಕೋವಿಡ್-19 ಅವಧಿಯಲ್ಲಿ ಎಂಟು ಗೋಶಾಲೆಗಳಿಗೆ 16,89,975 ರೂ. ಅನುದಾನ ನೀಡಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಶು ಇಲಾಖೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರದಿಂದ ಗೋ ಶಾಲೆಗಳ ಜಾನುವಾರುಗಳ ನಿರ್ವಹಣೆಗೆ ‘ಮೈಸೂರಿನ ಪಿಂಜರಾಪೋಲ್ ಮತ್ತು ಇತರ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮ’ದಡಿ ಸಹಾಯಧನ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಅಕ್ರಮ ಗೋವು ಸಾಗಾಣಿಕೆ/ಗೋ ಮಾಂಸ ಮಾರಾಟವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಡಿನಂಚಿನಲ್ಲಿ ಕೃಷಿ ಭೂಮಿಯನ್ನು ಹೊಂದಿರುವವರಿಗೆ ಸ್ವಯಂ ರಕ್ಷಣೆಗಾಗಿ ಜಿಲ್ಲಾಡಳಿತದ ವತಿಯಿಂದ ಗನ್ ಲೈಸೆನ್ಸ್ ನೀಡಲಾಗಿದ್ದು, ಪರವಾನಿಗೆ ಇಲ್ಲದೆ ಅಕ್ರಮವಾಗಿ ಗನ್ಗಳನ್ನು ಇಟ್ಟುಕೊಂಡಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿ ಯಲ್ಲಿ ರೇಬಿಸ್ ಕ್ಯಾಂಪ್ ಮತ್ತು ಎಬಿಸಿ, ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಆದೇಶದನ್ವಯ ಪೆಟ್ ಶಾಪ್ ಮತ್ತು ಡಾಗ್ ಬ್ರೀಡಿಂಗ್ ಸೆಂಟರ್ ನಡೆಸುತ್ತಿರುವವರು ಕಡ್ಡಾಯವಾಗಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು. ಬೇಸಿಗೆ ಅವಧಿಯಲ್ಲಿ ಕಾಡಿನಲ್ಲಿರುವ ಪ್ರಾಣಿಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಕಾಡಿನಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಪಶುಪಾಲನಾ ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಟಿ.ಜಿ. ಪ್ರಸನ್ನ, ವಿನಯ್ ಎಲ್. ಶೆಟ್ಟಿ, ಎಚ್.ಶಶಿಧರ ಶೆಟ್ಟಿ, ಸುಮಾ ಆರ್. ನಾಯಕ್ ಹಾಗೂ ವಿವಿಧ ಗೋಶಾಲೆಯ ಮುಖ್ಯಸ್ಥರು, ಪಶು ವೈದ್ಯಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.