ಹರಿಕೃಷ್ಣ ಬಂಟ್ವಾಳರಂತಹ ವಿಶ್ವಾಸ ಘಾತಕ ವ್ಯಕ್ತಿ ಬೇರೊಬ್ಬರಿಲ್ಲ: ರಮಾನಾಥ ರೈ
![ಹರಿಕೃಷ್ಣ ಬಂಟ್ವಾಳರಂತಹ ವಿಶ್ವಾಸ ಘಾತಕ ವ್ಯಕ್ತಿ ಬೇರೊಬ್ಬರಿಲ್ಲ: ರಮಾನಾಥ ರೈ ಹರಿಕೃಷ್ಣ ಬಂಟ್ವಾಳರಂತಹ ವಿಶ್ವಾಸ ಘಾತಕ ವ್ಯಕ್ತಿ ಬೇರೊಬ್ಬರಿಲ್ಲ: ರಮಾನಾಥ ರೈ](https://www.varthabharati.in/sites/default/files/images/articles/2020/11/11/267008-1605103391.jpeg)
ಬಂಟ್ವಾಳ : ಚುನಾವಣೆಯಲ್ಲಿ ವಿರೋಧ ಪಕ್ಷದವರಿಂದ ಹಣ ಪಡೆದುಕೊಂಡು ಸ್ವಂತ ಪಕ್ಷಕ್ಕೆ ವಂಚನೆ ಮಾಡುವ ಹರಿಕೃಷ್ಣ ಬಂಟ್ವಾಳ ಅವರಂತಹ ವಿಶ್ವಾಸ ಘಾತಕ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ಬೇರೊಬ್ಬರಿಲ್ಲ. ಅವರನ್ನು ಆದಷ್ಟು ಬೇಗ ದೂರ ಮಾಡದಿದ್ದರೆ ಶಾಸಕ ರಾಜೇಶ್ ನಾಯ್ಕ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೂ ಅವರು ಕೇಡು ಬಗೆಯಲಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಎಸ್ ಡಿಪಿಐ ಜೊತೆ ಯಾವುದೇ ಹೊಂದಾಣಿಕೆಯಾಗಲಿ, ಸಭೆಯಾಗಲಿ ನಡೆದಿಲ್ಲ. ಎಸ್.ಡಿಪಿಐ ಜೊತೆ ಕಾಂಗ್ರೆಸ್ ಹೊಟೇಲ್ ನಲ್ಲಿ ಸಭೆ ನಡೆಸಿದೆ ಎಂದು ಆರೋಪಿಸಿರುವ ಹರಿಕೃಷ್ಣ ಬಂಟ್ವಾಳ ಇದಕ್ಕೆ ಒಂದು ಸಣ್ಣ ಪುರಾವೆಯನ್ನಾದರೂ ಒದಗಿಸಲಿ. ಪ್ರತಿ ಹೊಟೇಲ್ ಗಳಲ್ಲಿ ಸಿಸಿ ಕೆಮರಾ, ಸಾಮಾಜಿಕ ಜಾಲತಾಣ ವ್ಯಾಪಕವಾಗಿರುವ ಈ ಕಾಲದಲ್ಲಿ ಅವರಿಗೆ ಇದು ಕಷ್ಟದ ಕೆಲಸವೂ ಅಲ್ಲ ಎಂದು ಸವಾಲೆಸಿದರು.
ಉಳ್ಳಾಲ ನಗರ ಸಭೆಯಲ್ಲಿ ಬಿಜೆಪಿ - ಜೆಡಿಎಸ್ ಮಾಡಿದ್ದು ಹೊಂದಾಣಿಕೆ. ಬಂಟ್ವಾಳದಲ್ಲಿ ಅಂತದ್ದೇನು ನಡೆದಿಲ್ಲ. ಉಳ್ಳಾಲದಲ್ಲಿ ಎಸ್.ಡಿಪಿಐ ಜೊತೆ ಹೊಂದಾಣಿಕೆ ಮಾಡಲು ಬಿಜೆಪಿ ಮಾಡಿರುವ ಪ್ರಯತ್ನ ಗುಟ್ಟಾಗಿ ಉಳಿದಿಲ್ಲ. ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ಸಂಸದ ನಳಿನ್ ಕುಮಾರ್ ಅವರ ಕಾರಿನಲ್ಲಿಯೇ ಎಸ್ ಡಿಪಿಐಯ ಇಬ್ಬರು ಸದಸ್ಯರನ್ನು ಕರೆದುಕೊಂಡು ಬಂದು ಬಿಜೆಪಿ ಪರ ಮತಹಾಕಿಸಿ ಎಸ್ ಡಿಪಿಐ ಸದಸ್ಯೆ ಆಮಿನಾಬಿ ಶೇಖ್ ರನ್ನು ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಡಿದ್ದನ್ನು ಹರಿಕೃಷ್ಣ ಬಂಟ್ವಾಳ ನೆನಪು ಮಾಡಿಕೊಳ್ಳಲಿ ಎಂದು ರೈ ಹೇಳಿದರು.
ನಾನು 8 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 6 ಬಾರಿ ಶಾಸಕನಾಗಿದ್ದೇನೆ. 13 ವರ್ಷ ಸಚಿವನಾಗಿದ್ದೇನೆ. ಆದರೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಲು ಯೋಗ್ಯತೆ ಇಲ್ಲದ ಹರಿಕೃಷ್ಣ ಬಂಟ್ವಾಳ್ ನನ್ನನ್ನು ವೈಯುಕ್ತಿಕವಾಗಿ ಅವಮಾನಿಸುವ ಹೇಳಿಕೆ ನೀಡಿ ತೇಜೋವಧೆ ಮಾಡುತ್ತಿದ್ದಾರೆ. ತಾನು ಪ್ರಾಮಾಣಿಕತೆಗೆ ಒತ್ತು ಕೊಟ್ಟು ಕೆಲಸ ಮಾಡುವ ವ್ಯಕ್ತಿ. ನನ್ನ ಸಾರ್ವಜನಿಕ ಜೀವನ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಬಿಳಿ ಹಾಳೆಯಾಗಿದೆ ಎಂದು ರಮಾನಾಥ ರೈ ಹೇಳಿದರು.
ಸಾರ್ವಜನಿಕ ವೇದಿಕೆಯಲ್ಲೂ ಹರಿಕೃಷ್ಣ ಬಂಟ್ವಾಳ್ ನನ್ನ ಹೆಸರು ತೆಗೆದು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆದರೆ ನಾನು ಎಂದೂ ಹರಿಕೃಷ್ಣ ಬಂಟ್ವಾಳ ಅಥವಾ ಇತರ ಯಾರದ್ದೇ ಹೆಸರು ಉಲ್ಲೇಖಿಸಿ ಈವರೆಗೆ ಆರೋಪ ಮಾಡಿಲ್ಲ. ಆದರೆ ಮುನುಷ್ಯನ ಹುಟ್ಟಿಗೆ ಕಾರಣವಾಗುವ ನನ್ನ ಡಿ.ಎನ್.ಎ. ಕುರಿತು ಸಂಶಯ ವ್ಯಕ್ತಪಡಿಸಿ ಹರಿಕೃಷ್ಣ ಬಂಟ್ವಾಳ ಅತ್ಯಂತ ಹೀನಾಯವಾಗಿ ಮಾತನಾಡಿದ್ದಾರೆ. ಈ ಬಗ್ಗೆ ನನ್ನ ಸಮಾಜದ ಜನರು ಅರಿತುಕೊಳ್ಳಬೇಕು. ಹರಿಕೃಷ್ಣ ಬಂಟ್ವಾಳ್ ಅವರಷ್ಟು ಕೆಳಮಟ್ಟದ ವ್ಯಕ್ತಿತ್ವ ತನ್ನದಲ್ಲ ಎಂದು ರೈ ಹೇಳಿದರು.
ರಾಜಕೀಯವಾಗಿ ಜನಾರ್ದನ ಪೂಜಾರಿಯನ್ನು ಸೋಲಿಸಿರುವ ನಳಿನ್ ಕುಮಾರ್ ಕಟೀಲು ಜೊತೆ ಸೇರಿದ್ದು ನಾನಾ ಅಥವಾ ಹರಿಕೃಷ್ಣ ಬಂಟ್ವಾಳರಾ ಎಂಬುದನ್ನು ಅವರ ಸಮಾಜದ ಜನರು ಅರಿತುಕೊಳ್ಳಬೇಕು. ಕಾಂಗ್ರೆಸ್ ನನ್ನ ಧರ್ಮ. ಅದನ್ನು ಮೀರಿ ನಾನು ಎಂದೂ ನಡೆದಿಲ್ಲ. ಸಂಸದರು, ಜಿಲ್ಲೆಯ ಶಾಸಕರು ನನ್ನ ಸಮಾಜದವರು ಆಗಿದ್ದರೂ ನಾನು ಅವರ ಜೊತೆ ಸಂಬಂಧ ಇಟ್ಟಿಲ್ಲ. ಹರಿಕೃಷ್ಣ ಬಂಟ್ವಾಳ ನನ್ನ ಪ್ರತಿ ಚುನಾವಣೆಯಲ್ಲಿ ವಂಚನೆ ಮಾಡಿದ್ದಾರೆ ಎಂದು ರಮಾನಾಥ ರೈ ಟೀಕಾಪ್ರಹಾರಗೈದರು.
ಬಂಟ್ವಾಳದಲ್ಲಿ ಜಲೀಲ್ ಕರೋಪಾಡಿ, ಶರತ್ ಮಡಿವಾಳ, ನಾಸಿರ್ ಸಜಿಪ, ಆಶ್ರಫ್ ಕಲಾಯಿ, ಹರೀಶ್ ಪೂಜಾರಿ ಮೊದಲಾದವರ ಕೊಲೆ ಆಗಿದೆ. ಈ ಎಲ್ಲಾ ಕೊಲೆ ಪ್ರಕರಣಗಳ ಸರಿಯಾಗಿ ತನಿಖೆ ಆಗಿ ಬಂಧಿತರಾದವರು ಬಿಜೆಪಿ, ಎಸ್.ಡಿಪಿಐ ಕಾರ್ಯಕರ್ತರು. ಆದರೆ ಭಾರತಿ ಮತ್ತು ಅಬ್ದುಲ್ಲಾ ಅವರ ಕೊಲೆ ಪ್ರಕರಣದ ತನಿಖೆ ಸರಿಯಾಗಿ ಆಗಿಲ್ಲ. ಇದು ಎಲ್ಲರಿಗೂ ಗೊತ್ತಿದೆ. ಭಾರತಿ ಹತ್ಯೆ ಹಿಂದೆ ಹರಿಕೃಷ್ಣ ಬಂಟ್ವಾಳ ಅವರ ಸಂಬಂಧಿಕರಿದ್ದಾರೆ. ಅವರನ್ನು ಹರಿಕೃಷ್ಣ ಬಂಟ್ವಾಳ ಪ್ರಭಾವ ಬೀರಿ ರಕ್ಷಿಸುತ್ತಿದ್ದಾರೆ ಎಂದು ಅಂದು ಬಿಜೆಪಿ ಹೇಳಿತ್ತು. ಇಂದು ಅದೇ ಬಿಜೆಪಿಯಲ್ಲಿ ಕುಳಿತು ನನ್ನ ವಿರುದ್ಧ ಕೊಲೆ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರಿಂದ ಚುನಾಯಿತನಾಗಿದ್ದ ನಾನು ಸುದೀರ್ಘ ಅವಧಿಯಲ್ಲಿ ರಾಜಕೀಯದಲ್ಲಿ ಕೆಲಸ ಮಾಡಿದ್ದೆನೆ. ಜನಾರ್ದನ ಪೂಜಾರಿಗೆ ಚುನಾವಣೆಯಲ್ಲಿ ಸಮಸ್ಯೆ ಮಾಡಿದ್ದ ವಿಶ್ವಾಸ ಘಾತುಕ ವ್ಯಕ್ತಿ ಹರಿಕೃಷ್ಣ ಬಂಟ್ವಾಳ್ ರಿಂದ ಮುಂದಿನ ದಿನಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ರಾಜೇಶ್ ನಾಯ್ಕ್ ಅವರಿಗೂ ಖಂಡಿತವಾಗಿಯೂ ಕೆಡುಕು ಎದುರಾಗುತ್ತದೆ. ಅವರೂ ಎಚ್ಚರಿಕೆ ವಹಿಸಬೇಕೆಂದು ರಮಾನಾಥ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ಮುಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ, ಜಿ.ಪಂ. ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಮಾಯಿಲಪ್ಪ ಸಾಲ್ಯಾನ್, ಪ್ರಶಾಂತ್ ಕುಲಾಲ್ ಮೊದಲಾದವರಿದ್ದರು.