ಗೋಕರ್ಣದ ವೇದಾಶ್ರವ ಶರ್ಮರಿಗೆ ‘ಜನಪದ ವೈದ್ಯಸಿರಿ’ ಪ್ರಶಸ್ತಿ
ನ.13ಕ್ಕೆ ಪ್ರಶಸ್ತಿ ಪ್ರದಾನ
![ಗೋಕರ್ಣದ ವೇದಾಶ್ರವ ಶರ್ಮರಿಗೆ ‘ಜನಪದ ವೈದ್ಯಸಿರಿ’ ಪ್ರಶಸ್ತಿ ಗೋಕರ್ಣದ ವೇದಾಶ್ರವ ಶರ್ಮರಿಗೆ ‘ಜನಪದ ವೈದ್ಯಸಿರಿ’ ಪ್ರಶಸ್ತಿ](https://www.varthabharati.in/sites/default/files/images/articles/2020/11/11/267009-1605103503.jpg)
ವೇದಾಶ್ರವ
ಉಡುಪಿ, ನ.11: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದ 67 ವರ್ಷ ಪ್ರಾಯದ ಜನಪದ ವೈದ್ಯ ವೇದಾಶ್ರವ ಶರ್ಮರನ್ನು ಶ್ರೀಧರ್ಮಸ್ಥಳ ಮಂಜುನಾತೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ನೀಡಲಾಗುವ ಈ ಬಾರಿಯ ರಾಜ್ಯ ಮಟ್ಟದ ‘ಜನಪದ ವೈದ್ಯಸಿರಿ-2020’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯ ಹಾಗೂ ಮಾರ್ಗದರ್ಶನದಲ್ಲಿ ಎಸ್ಡಿಎಂ ಆಯುರ್ವೇದ ಕಾಲೇಜಿನ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕಳೆದ ಹಲವು ವರ್ಷಗಳಿಂದ ನೀಡಲಾಗುತ್ತಿದೆ.
ಉದ್ಯಾವರ ಕುತ್ಪಾಡಿಯಲ್ಲಿರುವ ಉಡುಪಿಯ ಶ್ರೀಧರ್ಮಸ್ಥಳ ಮಂಜುನಾ ಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಭವನದಲ್ಲಿ, ಇದೇ ನ.13ರ ಶುಕ್ರವಾರ ನಡೆಯುವ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಜಾನಪದ ಚಿಕಿತ್ಸಾ ಜ್ಞಾನಗಳನ್ನು ನಶಿಸದಂತೆ ಸಂಗ್ರಹಿಸಿ, ಅದನ್ನು ಜನರ ಆರೋಗ್ಯ ವರ್ಧನೆಗೆ ಬಳಸುವುದರೊಂದಿಗೆ ಅನೇಕರಿಗೆ ಸಸ್ಯಗಳ ರೋಗನಿವಾರಕ ಗುಣಗಳನ್ನು ತಿಳಿಸುವ ಕಾಯಕದಲ್ಲಿ ತೊಡಗಿರುವುದಕ್ಕೆ ಶರ್ಮ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಶೇಷವಾಗಿ ನೋವು, ಅಸ್ತಮಾ, ವಿವಿಧ ಚರ್ಮರೋಗ, ಸ್ತ್ರೀರೋಗಗಳು ಇತ್ಯಾದಿ ಅನೇಕ ಕಾಯಿಲೆಗಳಿಗೆ ತಮ್ಮ ಕುಟುಂಬದಿಂದ ಹಾಗೂ ಕಲಿಕಾನುಭವದಿಂದ ಪಡೆದ ಗಿಡಮೂಲಿಕಾ ಚಿಕಿತ್ಸೆಯನ್ನು ಪ್ರಯೋಗಿಸಿ ಅವರು ಪ್ರಸಿದ್ಧಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಕೇರಳದ ಅಮೃತಪುರಿಯ ಅಮೃತಾ ಸ್ಕೂಲ್ ಆಫ್ ಆಯುರ್ವೇದದ ಸಂಶೋಧನಾ ನಿರ್ದೇಶಕರಾದ ಡಾ. ರಾಮ ಮನೋಹರ್ ಪಿ. ಅವರು ಮುಖ್ಯ ಅತಿಥಿಯಾಗಿ ವರ್ಚುವಲ್ ಪ್ರಸ್ತಾವನೆಗೈಯಲಿದ್ದಾರೆ. ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಪೂರ್ಣಪ್ರಜ್ಞ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿದ್ದ ಡಾ. ಕೆ. ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ನೇರ ಪ್ರಸಾರವನ್ನು-https://www.facebook.com/events/682741885706074 -ದ ಮೂಲಕ ಸಾರ್ವಜನಿಕರೂ ವೀಕ್ಷಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಶ್ರೀನಿವಾಸ ಆಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.