ಉಡುಪಿ ಜಿಲ್ಲಾ ಬಿಜೆಪಿಯಿಂದ ವಿಜಯೋತ್ಸವ
![ಉಡುಪಿ ಜಿಲ್ಲಾ ಬಿಜೆಪಿಯಿಂದ ವಿಜಯೋತ್ಸವ ಉಡುಪಿ ಜಿಲ್ಲಾ ಬಿಜೆಪಿಯಿಂದ ವಿಜಯೋತ್ಸವ](https://www.varthabharati.in/sites/default/files/images/articles/2020/11/11/267012-1605101735.jpg)
ಉಡುಪಿ, ನ.11: ಶಿರಾ ಮತ್ತು ಆರ್.ಆರ್. ನಗರ ಉಪಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನಪರ ಆಡಳಿತ ವೈಖರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಂಘಟನಾ ಚತುರತೆಗೆ ಸಾಕ್ಷಿಯಾಗಿದ್ದು, ಈ ಗೆಲುವು ಮುಂದಿನ ಚುನಾವಣೆ ಗಳಿಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ ಶೆಟ್ಟಿ ಹೇಳಿದ್ದಾರೆ.
ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆ ಗೆಲುವಿನ ಬಗ್ಗೆ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಚೇರಿ ಬಳಿ ಬುಧವಾರ ನಡೆದ ಸಂಭ್ರಮಾಚರಣೆ ಯಲ್ಲಿ ಅವರು ಮಾತನಾಡುತಿದ್ದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗಿನಂತಿದ್ದು, ಗೊಂದಲದ ಗೂಡಾಗಿರುವ ನಾಯಕತ್ವ ಈ ಫಲಿತಾಂಶದಿಂದ ಜಗಜ್ಜಾಹೀರಾಗಿದೆ. ಪ್ರಧಾನಿ ಮೋದಿ ಪ್ರಭಾವ ಬಿಹಾರದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಿದ್ದು ದೇಶದೆಲ್ಲೆಡೆ ನಡೆಯುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಗಳಿಸಲಿದೆ ಎಂದರು.
ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಎರಡೂ ಕ್ಷೇತ್ರಗಳ ಉಪಚುನಾವಣಾ ಗೆಲುವು ರಾಜ್ಯದ ಅಭಿವೃದ್ಧಿ ಪರ ಆಡಳಿತ ಮತ್ತು ಬಿಜೆಪಿಯ ಪಕ್ಷ ಸಂಘಟನಾ ಶಕ್ತಿಯ ಪ್ರತೀಕವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಪಕ್ಷದ ನಾಯಕರ ನಿರೀಕ್ಷೆ ಯಂತೆಯೇ ಐತಿಹಾಸಿಕ ಗೆಲುವು ದೊರೆತಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಸಾಲ್ಯಾನ್, ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ, ಜಿಲ್ಲಾ ಸಹ ವಕ್ತಾರರಾದ ಗಿರೀಶ್ ಎಮ್. ಅಂಚನ್, ಶಿವಕುಮಾರ ಅಂಬಲಪಾಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ ಗುರ್ಮೆ, ಪ್ರಮುಖರಾದ ರಶ್ಮಿತಾ ಬಿ. ಶೆಟ್ಟಿ, ಮಂಜುನಾಥ್ ಮಣಿಪಾಲ್, ಆಲ್ವಿನ್ ಡಿಸೋಜಾ, ರೋಷನ್ ಶೆಟ್ಟಿ, ದಿನೇಶ್ ಅಮೀನ್, ಜಗದೀಶ್ ಆಚಾರ್ಯ, ಕಿಶೋರ ಕರಂಬಳ್ಳಿ, ಗಿರಿಧರ್ ಆಚಾರ್ಯ, ರಘುವೀರ್ ಶೆಣೈ, ಸಂತೋಷ್ ಸುವರ್ಣ ಬೊಳ್ಜೆ ಹಾಗೂ ಇತರರು ಉಪಸ್ಥಿತರಿದ್ದರು.